ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಮುಗಿಸುವ ಮುನ್ನ...

ವರುಷದ ತುದಿಯಲ್ಲಿ ತಿರುಗಿನೋಡಿದಾಗ....
ಹೌದು,ಕೊನೆಗೂ 2010 ಮುಗಿದೇ ಬಿಟ್ಟಿತು.ಮಾನವ ಜೀವನದ ನನ್ನ ಆಯಸ್ಸಿನ ಒಂದು ವರ್ಷ ನನ್ನ ಕೈ ಬಿಟ್ಟು ಜಾರಿತು.2009 ರ ಕೊನೆಯ ದಿನಗಳು.ನನ್ನ ಅತ್ಮೀಯರೆಲ್ಲ ಕೈಯಲ್ಲಿ ಸಂಬಳ ಹಿಡಿದು ನಿಂತಿದ್ದರು.ಕಾಲೇಜು ಜೀವನಕ್ಕೆ ವಿದಾಯ ಹೇಳುವಾಗ Highest Package ನ ಆಫರ್ ಕೈಯಲ್ಲಿ ಹಿಡಿದೂ call ಗಾಗಿ wait ಮಾಡ್ತಾ ಇದ್ದೆ..ನಮ್ಮ ಗ್ರಹಚಾರನೋ ಏನೋ ಎಲ್ಲಾ ಕಡೆಯ ದಾರಿಯು ಮುಚ್ಚಿ ಬಿಟ್ಟಿತ್ತು.ನಾನು ತುಂಬಾನೇ ಕುಗ್ಗಿ ಹೋಗಿದ್ದೆ.ಕೈ ಅಲ್ಲಿ ಮಾರ್ಕ್ಸ್ ಇದ್ದರೂ ಪ್ರಯೋಜನವಿರಲಿಲ್ಲ.ಸದಾ ಇತರರಿಗೆ ಆತ್ಮವಿಶ್ವಾಸದಲ್ಲಿ ಮಾದರಿಯಾಗಿದ್ದ ನಾನು ನನ್ನನ್ನೇ ಕಳೆದು ಕೊಂಡು ಬಿಟ್ಟಿದ್ದೆ.2010 ನನ್ನ ಪಾಲಿಗೆ ಒಳ್ಳೆಯದಾಗಿರಬೇಕೆಂದು ಬಯಸಿದ್ದೆ,ಬೇಡಿದ್ದೆ.ನನ್ನ ಬೇಡಿಕೆ ಸುಳ್ಳಾಗಲಿಲ್ಲ.ನಿಜ 2010 ನನ್ನ ಪಾಲಿನ ಮಹತ್ತರ ದಿನಗಳನ್ನು ಹೊತ್ತ ವರ್ಷ.ಈ ವರ್ಷದಲ್ಲಿ ಹಲವುಗಳು ನನ್ನ ಅಂತರಂಗದ ನೆನಪುಗಳ ಸಾಲಿಗೆ ಸೇರಿವೆ. ಮನದ ಪುಸ್ತಕದಲ್ಲಿ ಭದ್ರವಾಗಿ ಕುಳಿತಿವೆ.ಇಷ್ಟಪತ್ತಿದ್ದನ್ನೆಲ್ಲ ಎತ್ತಿಟ್ಟಿದ್ದೇನೆ.

ಪ್ರತಿಷ್ಠಿತ IT ಕಂಪನಿಯ ಗೇಟ್ ಮುಂದೆ ಇಂಟರ್ವ್ಯೂ ಗೆಂದು ಬಂದಾಗ ನಾನು ಇಲ್ಲಿಗೆ ತಕ್ಕವಳಾ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಂಡಿದ್ದೇನೆ.ಹಲವಾರು ಜನರನ್ನು ದಾಟಿ ಅದು ನನಗೆ ಒಲಿದಾಗ ಖುಷಿಯಿಂದ ಬೀಗಿದ್ದೇನೆ.ದೇವರು ಕೊನೆಗೂ ನನ್ನ ಬೇಡಿಕೆಯನ್ನು ಹೊಸವರ್ಷದ ತಿಂಗಳೊಳಗೆ ಪೂರೈಸಿದಾಗ ಮನದಲ್ಲೇ ಥ್ಯಾಂಕ್ಸ್ ಅಂದಿದ್ದೇನೆ.GATE RANKERS ಗಳ ಪಟ್ಟಿಯಲ್ಲಿ ನನ್ನ ಹೆಸರನ್ನು ಹಠದಿಂದ ಸೇರಿಸಿ ಕೊಂಡಿದ್ದೇನೆ.ಹತ್ತಿರದವರ ವಿಶ್ವಾಸ ಗಳಿಸಿದ್ದೇನೆ.ಬಹಳಷ್ಟನ್ನು ಕಲಿತಿದ್ದೇನೆ,ಕಲಿಸಿದ್ದೇನೆ.ಬಾಲ್ಯದ ನನ್ನ ವೈದ್ಯೆ ಯಾಗುವ ಕನಸನ್ನು ನನ್ನ ತಂಗಿ ಪೂರೈಸಿದಾಗ ಹೆಮ್ಮೆಯಿಂದ ಅವಳ ಭುಜ ತಟ್ಟಿದ್ದೇನೆ.ನನ್ನ ಸಂಗೀತದ ಪಟ್ಟಿ ಮುಟ್ಟಿ ಬೈಸಿಕೊಳ್ಳುತ್ತಿದ್ದ ನನ್ನ ಚಿಕ್ಕ ತಂಗಿ ಹತ್ತಾರು ವೇದಿಕೆಗಳಲ್ಲಿ ಹಾಡುತ್ತಿದ್ದರೆ ಕಣ್ಮುಚ್ಚಿ ತಲೆದೂಗುವ ಜನಗಳನ್ನು ಕಂಡು ಖುಷಿಯಿಂದ ಕಣ್ಣೀರಾಗಿದ್ದೇನೆ.ಮೊದಲ ಸಂಬಳವನ್ನು ಹೆತ್ತವರ ಕೈಗಿತ್ತಾಗ ಹೆಮ್ಮೆಯಿಂದ ಮೈಸವರಿದ, ಅವರ ಕಣ್ಣುಗಳಲ್ಲಿ ಕಂಡ ಸಾರ್ಥಕತೆಯ ಭಾವವನ್ನು ನನ್ನ ನೆನಪಿನಾಳದಲ್ಲಿ ಬಚ್ಚಿಟ್ಟು ಕೊಂಡಿದ್ದೇನೆ.ನನ್ನ ಕನಸಿನ ಕೂಸಾದ 'ಮಾನಸರಂಗ'ವನ್ನು ಕಟ್ಟಿ ಬೆಳೆಸಿದ್ದೇನೆ.ಬ್ಲಾಗ್ ಎಂಬ ಅದ್ಭುತ ಲೋಕಕ್ಕೆ ಅಂಬೆಗಾಲಿಡುತ್ತ ಬಂದಿದ್ದೇನೆ.ನನ್ನ ಬರವಣಿಗೆಯನ್ನು ಪ್ರೋತ್ಸಾಹಿಸುವರನ್ನು ಪಡೆದಿದ್ದೇನೆ.ಬರೆಯುತ್ತ ಎಡವಿದ್ದೇನೆ,ಎಡವುತ್ತಾ ಕಲಿತಿದ್ದೇನೆ.ನೆನಪುಗಳನ್ನು ಬಿಚ್ಚಿ ನನ್ನ ನೆಚ್ಚಿನವರನ್ನ ಭೇಟಿಯಾಗಿದ್ದೇನೆ.ಬಹಳಷ್ಟು ವರ್ಷಗಳ ನಂತರವೂ ಅವರಲ್ಲಿ ಹಾಗೆಯೇ ಉಳಿದ ಆತ್ಮೀಯತೆಯನ್ನು ಕಂಡಿದ್ದೇನೆ.ನನ್ನ ಕೈಲಾದ ಸಹಾಯ ಮಾಡಿದ್ದೇನೆ.ಸಹಾಯ ಪಡೆದು ನನ್ನ ಕಡೆಗಣಿಸಿದವರನ್ನು ಕಂಡು ಪಶ್ಚಾತ್ತಾಪ ಪಟ್ಟಿದ್ದೇನೆ. ಹೊಟ್ಟೆ ನೋವಾಗುವಷ್ಟು ನಕ್ಕಿದ್ದೇನೆ. ಒಮ್ಮೊಮ್ಮೆ ನನ್ನಲ್ಲೇ ನಾನು ಬಿಕ್ಕಿದ್ದೇನೆ.ಜನರ ಒಡನಾಟದಿಂದ ಬದುಕಿನ ಒಳ-ಹೊರಗಿನ ಕಾಳಷ್ಟನ್ನಾದರೂ ಅರಿತಿದ್ದೇನೆ.ನನ್ನಲ್ಲೇ ಬಹಳಷ್ಟು ಬದಲಾವಣೆಗಳನ್ನು ಅನಿವಾರ್ಯವಾಗಿ ತಂದು ಕೊಂಡಿದ್ದೇನೆ. ಈ ಶಹರದಲ್ಲೂ ರಕ್ತ ಸಂಬಂಧವಲ್ಲದ ಬಂಧುಗಳನ್ನು ಪಡೆದಿದ್ದೇನೆ.

ನನ್ನ ಈ ವರ್ಷದ ಖುಷಿಯಲ್ಲಿ ಪಾಲುದಾರರು ಹಲವರು..ಸದಾ ನನ್ನ ಆಸೆಗಳಿಗೆ ನೀರೆರೆವ ಅಪ್ಪ-ಅಮ್ಮ,ಚಿಕ್ಕವರಾದರೂ ಕೆಲವೊಂದಕ್ಕೆ ನನ್ನ ಮಾರ್ಗದರ್ಶಿಗಳು ಮತ್ತು ನನ್ನ ಕ್ಲೋಸ್ ಫ್ರೆಂಡ್ಸ್ ಗಳಾದ ನನ್ನ ತಂಗಿಯರು, ಏಳು ವರ್ಷಗಳಿಂದ ಸಹಮನಸಿಗಳಾಗಿ ನನ್ನ ಸುಖ-ದುಃಖ ಅರಿತ ಆತ್ಮೀಯ ಗೆಳತಿ,ಪಯಣಕ್ಕೆ ಜೊತೆಯಾಗಿ ಭಾಂಧವ್ಯ ಬೆಸೆದ roommate ,ಮಗಳಂತೆ ನೋಡಿಕೊಂಡ ಅಕ್ಕ-ಭಾವ,ನನಗೆ ಹೊರೆಯಾಗದಂತೆ ನೋಡಿಕೊಂಡ ಆಫೀಸ್ ಟೀಮ್ ,ಕೆಲಸದ ಜೊತೆಗೆ ಬದುಕನ್ನು ತಿಳಿ ಹೇಳುವ ನನ್ನ ಗುರು,ಮನ ತಟ್ಟಿದ,ಮನೆಯವರಂತಾದ PG ಅಂಕಲ್ -ಆಂಟಿ,ಕಾಲೇಜಿನ ಗೆಳೆಯರನ್ನು ನೆನಪಿಸುವ ಆಫೀಸ್ ಫ್ರೆಂಡ್ಸ್ ಗಳು,ಹಲವು ವರ್ಷಗಳ ನಂತರ ಸಿಕ್ಕ ನನ್ನ  ಆತ್ಮೀಯರು, ಪ್ರತಿ ಭೇಟಿಯಲ್ಲೂ ಆ ದಿನಗಳ ಮರುಕಳಿಸುವಂತೆ ಮಾಡುವ ದೋಸ್ತರು  ,ನನ್ನ ಮನಸಿನ ಭಾವಗಳ ಕನವರಿಕೆಗೆ ವೇದಿಕೆಯಾದ ಬ್ಲಾಗ್ ಪ್ರಪಂಚ,ಮೆಚ್ಚಿ ಓದುವ ಸಹ ಬ್ಲಾಗಿಗರು,ಹಚ್ಚಿಕೊಂಡ ಕೆಲ ಬ್ಲಾಗ್ ಮಿತ್ರರು ಹೀಗೆ ಉದ್ದ ಪಟ್ಟಿಯೇ ಇದೆ.ಇವರೆಲ್ಲರೂ ನನ್ನ ಈ ವರ್ಷದ ಪುಟಗಳಿಗೆ ಬಣ್ಣ ಹಚ್ಚಿದವರು.ಸುಖವನ್ನು ಹಂಚಬೇಕಂತೆ,ದುಃಖವನ್ನು ನುಂಗಬೇಕಂತೆ. ಅಲ್ಲೋ,ಇಲ್ಲೋ ಬಂದ ದುಃಖದ ಕ್ಷಣಗಳು ಈ ಸಂತಸದಲ್ಲಿ ಇಂಗಿ ಹೋಗಿವೆ.ಮತ್ತೆ ಎತ್ತುವ ಪ್ರಯತ್ನ ನನ್ನದಲ್ಲ.ಅಂತೂ 2010 ನ್ನು ಮುಗಿಸಿದ್ದೇನೆ.2011ನ್ನು  ನೀರಿಕ್ಷೆಯ ಕಣ್ಣುಗಳಿಂದ ನೋಡುತ್ತಿದ್ದೇನೆ.2011 ರ ಪಾಲಿಗೆ ಕೆಲವೊಂದು ಕನಸುಗಳನ್ನು ಎತ್ತಿಟ್ಟಿದ್ದೇನೆ.ನನಸು ಮಾಡಿಕೊಳ್ಳಲೇ ಬೇಕೆಂಬ ಛಲವಿದೆ.ಸೋತು ಎಲ್ಲಿ ಶರಣಾಗುವೆನೋ ಎಂಬ ಭಯದ ಮನವೂ ಇದೆ.ಹೊಸ ಆಸೆ,ಕಲ್ಪನೆ,ಲವಲವಿಕೆ ಕನಸು ಕಂಗಳೊಂದಿಗೆ ಹೊಸವರ್ಷವನ್ನು ಸ್ವಾಗತಿಸಲು ಮನಸ್ಸು ಸಜ್ಜಾಗಿದೆ. ಡಿವಿಜಿ ಯವರ ಕಗ್ಗವೊಂದು ನೆನಪಾಗ್ತಾ ಇದೆ. 

 ಹುಲ್ಲಾಗು ಬೆಟ್ಟದಡಿ,ಮನೆಗೆ ಮಲ್ಲಿಗೆ ಯಾಗು
 ಕಲ್ಲಾಗು ಕಷ್ಟಗಳ ವಿಧಿಯ ಮಳೆ ಸುರಿಯೆ|
 ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ 
 ಎಲ್ಲರೊಳಗೊಂದಾಗು ಮಂಕುತಿಮ್ಮ||

                                                                             
                                                                     
ಹೊಸ ವರ್ಷದ ಹೊಸ ಮುಂಜಾವು
ತರಲಿ ನಿಮ್ಮ ಬಾಳಲ್ಲಿ ಎಲ್ಲಿಲ್ಲದ ಗೆಲುವು
  ನನಸಾಗಲಿ ಕನಸು,ಹಸನಾಗಲಿ ಮನಸು
ಚಿಗುರಲಿ ಬಾಳಲ್ಲಿ ನವೋಲ್ಲಾಸ
  ಮೂಡಲಿ ಎಲ್ಲರಲಿ ಒಂದೇ ಎಂಬ ಸಮರಸ  

    ***"ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು"***

ಮನ..ಸೆರೆಯಾದ ಕ್ಷಣ..


"ನೀನೆ ಫೋನ್ ಮಾಡಲಿ ಎಂದು ಕಾಯ್ತಾ ಇದ್ದೆ..ನನ್ನ ನೆನಪೇ ಆಗೋಲ್ಲ ನಿಂಗೆ " ಎಂದ ತಂಗಿಯ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ ಈ ಬಾರಿ..ಹೌದು ಎಲ್ಲೋ ಏನೋ ಮರೆಯುತ್ತಿದ್ದೇನೆ..ಮನಸ್ಸು ಕಳೆದು ಹೋಗ್ತಾ ಇದೆ..ಯಾಕೆ ಕಾರಣ ಮಾತ್ರ ನಂಗೆ ಗೊತ್ತಿಲ್ಲ..ನನಗೆಂದೆ ಮೀಸಲಿಟ್ಟ ನನ್ನ ದಿನ ನಿತ್ಯದ ಒಂದಿಷ್ಟು ಸಮಯವೂ  ನನಗರಿವಿಲ್ಲದಂತೆ ಕಳೆದು ಹೋಗ್ತಾ ಇದೆ..ಹಿಗೆ ಏನು ಗೊತ್ತಾಗ್ತಾ ಇಲ್ಲ..ನೆಮ್ಮದಿಯಿಂದ ಕುಳಿತಿದ್ದ ಮನಸ್ಸು ಯಾಕೋ ಗೊಂದಲದ ಗೂಡಾಗಿ ಬಿಟ್ಟಿದೆ..ಎಲ್ಲೋ ನನ್ನ ನೀರಿಕ್ಷೆ,ಕನಸುಗಳು ನನ್ನ ಬಿಟ್ಟು ಜಾರುವಂತೆ ಭಾಸವಾಗ್ತಾ ಇದೆ..ಎಲ್ಲಾ ಕಡೆಯಿಂದಲೂ ಒಂದೇ ಪ್ರಶ್ನೆ..ಉತ್ತರ ಮಾತ್ರ ನನಗೆ ಬಿಡಿಸಲಾಗದ ಒಗಟು..

ನನ್ನ ಆತ್ಮೀಯ ಗೆಳತಿಯಾದ ಓದು,ನನ್ನ ಗುನುಗುನಿಸುವಂತೆ ಮಾಡುವ ಹಳೆಯ,ನನ್ನಿಚ್ಚೆಯ ಹಾಡುಗಳು,ಪೇಪರ್ನಲ್ಲಿ ಬರುವ ತಪ್ಪದೆ ಓದುವ ಕಾಲಂಗಳು,ನನ್ನ ಪಕ್ಕಕ್ಕೆ ಪವಡಿಸುವ ನನ್ನ laptop ಚಿಂಟು,ಇವೆಲ್ಲದಕ್ಕೂ ನಾನು ಇತ್ತೀಚಿಗೆ ಪ್ರಶ್ನೆಯಾಗಿ ಬಿಟ್ಟಿದ್ದೇನೆ..ಮೊದಲಿನ ಚಿಟಿ ಚಿಟಿ ಮಳೆಯಂತ ಮಾತು ಒಮ್ಮೊಮ್ಮೆ ನನ್ನ ಮೌನದಲ್ಲಿ ಕಳೆದು ಹೋಗ್ತಾ ಇದೆ..ಅಪರಿಚತ ಭಾವವೊಂದು ನನ್ನನು ಕಾಡ್ತಾ ಇದೆ.ಗೊತ್ತಿಲ್ಲದೇ ಸದ್ದಿಲ್ಲದೇ ಯಾರೋ ಬಂದು ಕುಳಿತು ಬಿಟ್ಟಿದ್ದಾರೆ. ಈ ಬಾರಿ ಸಿಕ್ಕಿದಾಗ ನನ್ನ ಸ್ನೇಹಿತರು ಕೇಳಿದ ಪ್ರಶ್ನೆಗಳಿಗೆ ನನ್ನ ನಗುವೊಂದೇ ಉತ್ತರವಾಗಿ ಸಿಕ್ಕಿದ್ದು ಅವರಿಗೆ..ಓದಲೆಂದು ತಂದ ಪುಸ್ತಕಗಳು  ಸಪ್ಪೆ ಮೋರೆಯಲ್ಲಿ ಇಟ್ಟಲ್ಲೆ ತೆಪ್ಪಗೆ ಕುಳಿತಿವೆ..ಮನಸಿನ ಕನಸೊಂದು ಅರಳಲು ಸಮಯವಿಲ್ಲದೆ ಪರದಾಡುತ್ತಿದೆ..ನೆಮ್ಮದಿಯ ನಿದ್ದೆಯೊಂದು ಮತ್ತೆ ನನ್ನ ಮುಖದಲ್ಲಿನ ಹೂನಗೆಗೆ ಕಾಯುತ್ತಿದೆ..ಕಾಡುತ್ತಿರುವ ಗೊಂದಲಕ್ಕೆ ಪೂರ್ಣವಿರಾಮದ ನೀರಿಕ್ಷೆ..ಇದು ಆಕಸ್ಮಿಕವೋ, ಅನಿವಾರ್ಯವೋ ನಾ ತಿಳಿಯೆ.. 

ನಾನು ಮತ್ತೆ ವಾಪಸ್ಸಾಗ ಬೇಕಿದೆ..ಮತ್ತೆ ಅದೇ ಸುಂದರ ನಿನ್ನೆಗಳಿಗೆ..ಮರೆತ ಪ್ರತಿಯೊಂದನ್ನು ಕಾಳಜಿಯಿಂದ ಎತ್ತಿ ಮತ್ತೆ ಮೊದಲಿನಂತೆ ಮುದ್ದಿಸಬೇಕಾಗಿದೆ..ಇಂದಿನ ನಗುವಿನ ಹಿಂದೆ ಮರೆಯಾದ ಅಂದಿನ ನನ್ನ ತರಹ ತರಹದ ನಗುವಿಗೆ ಹೊಸ ಭಾಷ್ಯ ಕೊಡಬೇಕಾಗಿದೆ..ಸ್ನೇಹಿತರ ಗುಂಪಿನ ನಡುವೆ ಕುಳಿತು ಮತ್ತೆ ಕಾಡಿಸಿಕೊಳ್ಳಬೇಕಾಗಿದೆ..ಹುಸಿ ಮುನಿಸಿನಿಂದ ನಾಚಿಕೊಂಡು ಮತ್ತೆ ಕೆಂಪಗಾಗಬೇಕಾಗಿದೆ..ಹೊಸವರುಷವನ್ನು ಮತ್ತೆ ಹೊಸ ಹುರುಪಿನೊಂದಿಗೆ ಆರಂಭಿಸಬೇಕಿದೆ..ಮೊಗ್ಗಾಗಿ ಅರಳಿದ ಕನಸೊಂದಕೆ ಸೊಗಸಾಗಿ, ನನಸಾಗಿ ಅರಳುವ ಮನಸಾಗಿದೆ..ಉಂಟಾದ ಗೊಂದಲಕ್ಕೆ ಮಂಗಳ ಹಾಡುವ ನೀರಿಕ್ಷೆ..ಹೊಸ ಉತ್ಸಾಹ,ಹೊಸ ಲವಲವಿಕೆಯ ಒಗ್ಗೂಡಿಸಿ ಕೊಳ್ಳುವ ಬಯಕೆ..ಮರೆತ ಅಕ್ಷರಗಳಿಗೆ,ಮೂಡಿದ ಬರಹಗಳಿಗೆ ಅಂತಿಮ ರೂಪ ಕೊಡಬೇಕೆಂಬ ಹಠದೊಂದಿಗೆ..

ನಿಮ್ಮವಳು...

ಅಡುಗೆ ಮನೆ-ದಾಲ್ ರೈಸ್

ಹವ್ಯಾಸವಾಗಿ ಬರವಣಿಗೆ ಹೇಗೋ, ಹಾಗೆ ಅಡುಗೆಯ ಹುಚ್ಚು ನನ್ನಲ್ಲಿ..ಹೊಸತನ್ನು ಕಲಿಯುವ, ಮಾಡುವ ಅಭ್ಯಾಸ...ನಾನು ಕಲಿಯುವುದು ಮಾಡುವುದು ನಮಗೆ ಸಿಗುವ ಅತ್ಯಂತ ಸರಳ ವಸ್ತುಗಳಿಂದಲೇ..ಆಫೀಸ್ ನಲ್ಲಿ ಫ್ರೀ ಇದ್ದಾಗ ಅಡುಗೆ ತಾಣಗಳನ್ನು ನೋಡಿ,ನನಗೆ ಇಷ್ಟವಾದದ್ದನ್ನು ಬರೆದು ಕೊಂಡು ನಾನು ಮನೆಗೆ ಹೋದಾಗ ಟ್ರೈ ಮಾಡುತ್ತೇನೆ..ಆದರೆ ಇಲ್ಲಿಯವರೆಗೆ ನಾನು ಯಾರಿಂದಲೂ ಯಾಕಾದರೂ ಹೊಸತನ್ನು ಮಾಡುತ್ತಳೊ ಎಂದು ಬೈಸಿಕೊಂಡಿಲ್ಲ.. ತಕ್ಕಮಟ್ಟಿಗೆ ಚೆನ್ನಾಗೆ ಮಾಡುತ್ತೇನೆ..ಹಾಗೆ ಮೊನ್ನೆ  ಮನೆಗೆ ಹೋದಾಗ  ಅಡುಗೆ ಕಾರ್ಯಕ್ರಮವನ್ನು ನೋಡುತ್ತಿದ್ದೆ.ದಾಲ್ ರೈಸ್  ಮಾಡುವುದನ್ನು ತೋರಿಸುತ್ತ ಇದ್ದರು.. ನಾನು ಇದು ಹೋಟೆಲಿನಲ್ಲಿ ತಿನ್ನುವ ಕಿಚಡಿ ಇರಬೇಕೆಂದು ಅಂದು ಕೊಂಡೆ..ಅಮ್ಮ ಕೂಡ ಅದೇ ಇರಬೇಕೆಂದು ಹೇಳಿದರು..ಆಮೇಲೆ ಮಾಡುವ ವಿಧಾನ ನೋಡಿದ ಮೇಲೆ ಬೇರೇನೆ ಅನ್ನಿಸಿತು..ಟ್ರೈ ಮಾಡಿದೆ.. ಚೆನ್ನಾಗಿತ್ತು...ಆಫೀಸ್ ಗೆ,ಮಕ್ಕಳ ಲಂಚ್ ಬಾಕ್ಸ್ ಗೆ  ಚೆನ್ನಾಗಿ ಇರತ್ತೆ..ನೀವು  ಟ್ರೈ ಮಾಡಿ.ಹೇಗಿದೆ ಅಂತ ಹೇಳಿ..

ಬೇಕಾದ ಸಾಮಗ್ರಿಗಳನ್ನು ನಿಮ್ಮ ರುಚಿಗೆ,ಪ್ರಮಾಣಕ್ಕೆ  ತಕ್ಕಂತೆ ಬಳಸಿ..
ಸಾಮಗ್ರಿಗಳು..
ಅಕ್ಕಿ, ತೊಗರಿಬೇಳೆ, ಶುಂಟಿ,ಬೆಳ್ಳುಳ್ಳಿ,ಕೆಂಪು ಮೆಣಸಿನ ಪುಡಿ, ಟೊಮೇಟೊ,ಕೊತ್ತಂಬರಿ ಸೊಪ್ಪು,ಗರಂ ಮಸಾಲ,ಹಸಿಮೆಣಸಿನ ಕಾಯಿ,ಈರುಳ್ಳಿ, ಒಗ್ಗರಣೆಗೆ ಎಣ್ಣೆ,ಅರಿಸಿನ,ಸಾಸಿವೆ,ಬೇವಿನ ಸೊಪ್ಪು ಹಾಗು ರುಚಿಗೆ ತಕ್ಕಷ್ಟು ಉಪ್ಪು,ಸ್ವಲ್ಪ ಸಕ್ಕರೆ, ನಿಂಬೆ ರಸ...
ವಿಧಾನ
ಮೊದಲು  ಒಂದು ಬಾಣಲಿ ಯಲ್ಲಿ ಒಗ್ಗರಣೆಗೆ ಎಣ್ಣೆ ಹಾಕಿ,ಅದು ಕಾದ ನಂತರ ಸಾಸಿವೆ, ಹೆಚ್ಚಿಕೊಂಡ ಈರುಳ್ಳಿ ಹಾಕಿ ಫ್ರೈ ಮಾಡಬೇಕು..ಆಮೇಲೆ ಅರಿಸಿನ ಬೆವಿನಸೋಪ್ಪನ್ನು ಹಾಕಬೇಕು..ನಂತರ ಸಣ್ಣದಾಗಿ ಹೆಚ್ಚಿಕೊಂಡ ಟೊಮೇಟೊ, ಶುಂಟಿ ಬೆಳ್ಳುಳ್ಳಿ ಪೇಸ್ಟ್  ನೊಂದಿಗೆ ಬೇಯಲು ನೀರನ್ನು ಹಾಕಬೇಕು..ನೀರು ಚೆನ್ನಾಗಿ ಕುದಿ ಬಂದಮೇಲೆ  ಖಾರ  ಬೇಕಾದಷ್ಟೇ ಕೆಂಪು ಮೆಣಸಿನ ಪುಡಿ,ಗರಂ ಮಸಾಲ   ಪರಿಮಳಕ್ಕೆ ಉದ್ದವಾಗಿ ಹೆಚ್ಚಿಕೊಂಡ ಹಸಿಮೆಣಸಿನ ಕಾಯನ್ನು,ಕೊತ್ತಂಬರಿ  ಸೊಪ್ಪನ್ನು  ಹಾಕಬೇಕು..
ಕುಕ್ಕರಿನಲ್ಲಿ  ಪ್ರಮಾಣಕ್ಕೆ ತಕ್ಕಂತೆ ಅಕ್ಕಿ, ಅದಕ್ಕೆ ತಕ್ಕಂತೆ ತೊಗರಿಬೇಳೆ  [ ಒಂದು ಕಪ್ ಅಕ್ಕಿಗೆ ಕಾಲು ಕಪ್ ಬೇಳೆಯಂತೆ] ಹಾಗು ಬಾಣಲಿ ಯಲ್ಲಿ ಮಾಡಿಕೊಂಡ ಮಿಶ್ರಣವನ್ನು ಹಾಕಿ, ಉಪ್ಪು,ಸಕ್ಕರೆ  ,ನಿಂಬೆ ರಸ  ಬೆರೆಸಿ  ,೩ ವಿಸಲ್  ಹಾಕಿಸಿದರೆ  ದಾಲ್ ರೈಸ್  ತಿನ್ನಲು ರೆಡಿ..,ಇದು ಆರೋಗ್ಯದಯಕವು ಅಲ್ಲದೆ ,ಮಾಡಲು ತುಂಬಾ ಸುಲಭವಾದ  ರೈಸ್ ಬಾತ್ . 


ನಕ್ಕುಬಿಡಿ ಒಮ್ಮೆ.... :)

"ನಗುವುದು ಸಹಜ ಧರ್ಮ..ನಗಿಸುವುದು ಪರಧರ್ಮ.." ನಗು ಎನ್ನುವುದು ಮನುಷ್ಯ ಜೀವನದ ಅವಿಭಾಜ್ಯ ಅಂಗ..ಮನುಷ್ಯ ಒಂದುವೇಳೆ ನಘು ಎನ್ನುವುದನ್ನು ಮರೆತರೆ ಏನಾಗಬಹುದೆಂದು ಊಹಿಸಲು ಅಸಾಧ್ಯ.

ನಿನ್ನೆ ಭಾನುವಾರ ಬೇಸರ ಕಳೆಯಲೆಂದು ಟಿವಿ ನೋಡುತ್ತಾ ಕುಳಿತಿದ್ದೆ..ಚಾನೆಲ್ ಬದಲಾಯಿಸುವಾಗ ಯಾವದೋ ಒಂದು ಕನ್ನಡ ಚಾನೆಲ್ಲಿನಲ್ಲಿ ಹಾಸ್ಯದ ಕಾರ್ಯಕ್ರಮ ಮೂಡಿ ಬರುತ್ತಾ ಇತ್ತು.. ಹಾಸ್ಯಕವಿ ದುಂಡಿರಾಜರು ಆ ಕಾರ್ಯಕ್ರಮದ ನಿರೂಪಕರು..ಮೊದಲಿನಿಂದಲೂ ನಾನು ಅವರ ಅಭಿಮಾನಿ.ಈ ಹಾಸ್ಯಕವಿಗಳ ಸಮಯ ಪ್ರಜ್ಞೆ ಹೇಗಿರುತ್ತದೆ ಎಂದರೆ  ದಿನ ನಿತ್ಯದ ಜೀವನದ ಆಗು ಹೋಗುಗಳನ್ನು,ನಾವಾಡುವ ಸಾಮಾನ್ಯ ಭಾಷೆಯಲ್ಲೇ ಹಾಸ್ಯವನ್ನು ಹುಡುಕುವವರು ಅವರು..ಆ ಕಾರ್ಯಕ್ರಮದ ಮೂಲ ಉದ್ದೇಶ ಏನೆಂದರೆ ನಮ್ಮ ರಾಜ್ಯದ ಮೂಲೆ ಮೂಲೆ ಅಲ್ಲಿ ಇರುವ ಹಾಸ್ಯ ಕವಿಗಳನ್ನು ಆಹ್ವಾನಿಸಿ ಅವರ ಪ್ರತಿಭೆಗೆ, ಕವಿತೆಗಳಿಗೆ, ಅಣಕುಗಳಿಗೆ ವೇದಿಕೆ ಒದಗಿಸುವುದು. ಜೊತೆಗೆ ದುಂಡಿರಾಜರ ಹಾಸ್ಯ ರಸಾಯನವು ಹರಿಯುತ್ತದೆ.. ಅಲ್ಲಿ ವಾಚಿಸಿದ ನನಗೆ ಇಷ್ಟವಾದ ಕೆಲವೊಂದನ್ನು ಎತ್ತಿಟ್ಟಿದ್ದೇನೆ.. ಓದಿ ನಕ್ಕುಬಿಡಿ ಒಮ್ಮೆ...

* ಹೆಣ್ಣು ಗಂಡನನ್ನು ವರಿಸುವುದು ಸ್ವಯoವರ
  ಆದರೆ, ಗಂಡು ಹೆಣ್ಣನ್ನು ವರಿಸುವುದು ಸ್ವಯಂ"ವರಿ"  ??
* ನಮ್ಮ ಮನೆಯಲ್ಲಿ ಎಲ್ಲದನ್ನೂ ತೀರ್ಮಾನಿಸುವುದು ಅಪ್ಪನೇ
   ಆದರೆ, ಅಮ್ಮನಿಂದ ಪಡೆದು ಅಪ್ಪಣೆ!!!!!!!!
* ರೋಗಿ ಹೆಂಡತಿ  ಗಂಡನಿಗೆ ನಿದ್ರೆ ಉಂಟೆ ಪಾಪ..
   ಸಾಗಿದವು ಚಿಂತೆಗಳು ಒಂದರ ಹಿಂದೆ ಒಂದು..
   ಹೇಗಿದೆಯೋ ಮುಖಬಣ್ಣ ಎರಡನೇ ಹೆಂಡತಿಗೆ..
   ಜಗ ಹೀಗೆ ಅವಅವರಿಗೆ  ನೋಡಯ್ಯ ತಿಮ್ಮ!!!!
*  ಅವಳದ್ದು ಸಿಮ್ಮಾ ರಾಶಿ
    ಅವನದು ಮೇಷ ರಾಶಿ
    ಮಕ್ಕಳಿಗೆ ಬಾರಿ ಕೇಶ ರಾಶಿ!!!
* ಸತ್ಯ ಹೇಳಿದರೆ ಆಗುವುದು ಗದ್ದಲ ಹರತಾಳ
   ಪಕ್ಕದ ಮನೆಯಾಕೆಗೆ ಚೆಲುವೆ ಎಂದರೆ,
   ಹೆಂಡತಿ ಸುಮ್ಮನೆ ಇರ್ತಾಳ....???!!!


* ಡೊಳ್ಳು ಹೊಟ್ಟೆ ಖಾಲಿ ಖಾಲಿ ಜನನಾಯಕ..

  ಯಾವಾಗಲೂ ತಿನ್ನೋದೆನ ನಿನ್ನ ಕಾಯಕ..
   ಓದೋದಕ್ಕೆ ಬರೋಲ್ಲ, ಬರೆಯೋಕು ಬರೋಲ್ಲ..
   ಮಂತ್ರಿ ಹೆಂಗೆ ಅಗ್ತಿಯಪ್ಪ..????
  (ತಿರುಪತಿ ತಿರುಮಲ ಎಂಬ ಹಾಡಿನ remake )
* ಮಾವ  ಮಾವ ಇಲ್ಲಿ ಮರೆಯಾದೆ..
  ಹೋಗ್ತಾ ಇದೆ ಇಲ್ಲಿ ಅಳಿಯನ ಮರ್ಯಾದೆ...
* ನಾನೇಕೆ ಬಡವನು, ನಾನೇಕೆ ಪರದೇಶಿ
   ಸೋಮಾರಿ ಹೇ ಮಾವ ನೀನಿರುವ ತನಕ..

   ಬೂಟು ಕೊಡಿಸುವವ ನೀನೆ,ಪಾಲಿಶ್ ಹಾಕುವವ ನೀನೆ 
   ಉಡಲು,ತೊಡಲು ಅರಿವೇ ಕೊಡಿಸುವವ ನೀನೆ..
   ಮಾಡದೇ ಬಾಣoತಿಯ ಬಾಣoತನ ಮಾಡಿಸುವವನು ನೀನೆ..
   ನಾನೇಕೆ ಬಡವನು ನೀನಿರುವ ತನಕ...
* ನಿನ್ನೆ ಯಾಕೆ, ಇಂದು ಈಕೆ..
   ನಾಳೆ ಮತ್ತೊಬ್ಬಳೆ....
   ಹೀಗೆ ಬದಲು ಮಾಡಲು
   ಹೆಣ್ಣು ಟಿವಿ ಚಾನೆಲ್ಲೇ.....??? 

ನಾವೇಕೆ ಕೆಲವೊಂದನ್ನು ಮರೆಯುತ್ತೇವೆ?!!

[ಇದು ಯಾರನ್ನೋ ಮನದಲ್ಲಿಟ್ಟು ಕೊಂಡು ಬರೆದ ಲೇಖನವಲ್ಲ..ನಾನು ನೋಡಿದ,ಕೇಳಿದ,ನನ್ನ ಅನುಭವದ ಕೆಲವೊಂದು ಸತ್ಯಗಳಿಗೆ ಅಕ್ಷರ ರೂಪ ಕೊಡುವ ಸಣ್ಣ ಪ್ರಯತ್ನ ಮಾಡಿದ್ದೇನೆ ಅಷ್ಟೇ ..]

ಮರೆವು ಎನ್ನುವುದು ಮನುಷ್ಯನಿಗೆ ಹೇಗೆ ವರದಾನವೋ ಹಾಗೆ ಶಾಪವು ಹೌದು..ಒಳ್ಳೆಯದನ್ನು ಮರೆಸಿ ನೋವನ್ನು ಮಾತ್ರ ನೆನಪಿಸುವುದು..ಮನುಷ್ಯನ ಸ್ವಭಾವವೇ ಹಾಗೆ.ಒಳ್ಳೆಯದನ್ನು ನಮಗೆ ಒಳ್ಳೆಯದನ್ನು ಬಯಸಿದವರನ್ನು ಬೇಗನೆ ಮರೆತು ಬಿಡುತ್ತೇವೆ.ಜೀವನದ ಪಯಣದಲ್ಲಿ ಪಕ್ಕದಲ್ಲಿ ಬಂದು ಕೂತು, ಇದ್ದು ಹೋದ ಹಲವಾರು ವ್ಯಕ್ತಿಗಳಲ್ಲಿ ಮರೆಯದೆ ನೆನಪಾಗುವರು ಕೇವಲ ಬೆರಳೆಣಿಕೆಯಷ್ಟು..ಅಂಥವರ  ಸಹಾಯ ನಮಗೆ ಒಳ್ಳೆಯದಗುವ ತನಕ ಎಂಬಂತೆ ಬದುಕಿ ಬಿಡುತ್ತೇವೆ..ಸ್ವಹಿತದಲ್ಲಿ ಸ್ವಂತದವರನ್ನು ಕಡೆಗಣಿಸುತ್ತೇವೆ...ಎಂದೋ ಬಂದ ಹುಡುಗ/ಹುಡುಗಿಯ ನೆಪದಲ್ಲಿ ಸದಾ ನಮ್ಮ ಜೊತೆಗೆ ಇದ್ದು ಬಿದ್ದು ಏಳುತ್ತಿದ್ದಾಗಿನಿಂದ ಕೈಹಿಡಿದು ನಡೆಸಿದ ತಂದೆತಾಯಿಯ ನೆನಪು ಮಾಸುತ್ತದೆ.  ಒಮ್ಮೆ ಯಾವನೋ ಒಬ್ಬ ತೋರಿಸಿದ ಅಕ್ಕರೆಯಿಂದ,ಕಾಳಜಿಯ ಮುಂದೆ  ವಿದ್ಯೆಯನೀಡಿ ಜೀವನ ಪಥವನ್ನು ತೋರಿದ ಪಾಲಕರ ಪ್ರೀತಿ ಮರೆತುಹೋಗುತ್ತದೆ..ಕೊನೆಯಕಾಲದಲ್ಲಿ ಕೊನೆತನಕ ಬಂದವರ ಮರೆತುಬಿಡುತ್ತೇವೆ..ಅವರ ನೋವಿಗಿಂತ ಯಾವನೋ ಒಬ್ಬನ ನೋವೆ ನಮಗೆ ಹೆಚ್ಚಾಗಿ ಬಿಡುತ್ತದೆ..ಹಾಗೆಂದ ಮಾತ್ರಕ್ಕೆ ಯಾರನ್ನು ಕಡೆಗನಿಸಬೇಕೆಂದಲ್ಲ..ಗುರಿಯ ಹುದುಕಾಟದ್ದಲ್ಲಿದ್ದಾಗ ಗುರಿತೊರಿದ  ಗುರುವನ್ನು ಮರೆತಂತೆ,ಜೀವಕ್ಕೆ ಜೀವ ಕೊಡುವ ಜೀವದ ಗೆಳತಿಯನ್ನು ಕಡೆಗಣಿಸಿದಂತೆ, ಅತ್ತಾಗ ಸಮಾಧಾನ ಮಾಡಿದ ಗೆಳೆಯರನ್ನು ,ಕೆಲಸ ದೊರಕಲು ಸಹಾಯ ಮಾಡಿದ ವ್ಯಕ್ತಿಯನ್ನು ನಮಗೆಲ್ಲ ದೊರೆತಾಗ ಗೊತ್ತಿಲ್ಲದೇ ಮರೆತು ಬಿಡುತ್ತೇವೆ..' ಭದ್ರಬುನಾದಿಯಿಂದಲೇ ಸುಭದ್ರ ಕಟ್ಟಡ' ಎಂಬ ಮಾತೇ  ಮರೆತುಹೋಗುತ್ತದೆ..ಕೊನೆಗೆ ಇವೆಲ್ಲದಕ್ಕೆ ಕಾರಣನಾದ ದೇವರು ಮರೆತುಹೊಗುತ್ತಾನೆ...


ಒಳ್ಳೆಯದರ ಬೆಲೆ ಅರಿವಾಗುವುದು ನಾವು ಅದನ್ನು ಕಳೆದುಕೊಂಡಾಗಲೇ.ಕಳೆದು ಕೊಳ್ಳುವ ಮುನ್ನ ಒಮ್ಮೆ ಯೋಚಿಸಿ.ತಂದೆತಾಯಿಯ ತ್ಯಾಗದ ಮುಂದೆ,ಪ್ರೀತಿಯ ಮುಂದೆ ಯಾವದು ದೊಡ್ಡದಲ್ಲ.ಇಂದು ಬಂದ ಪ್ರೀತಿಗಿಂತ,ಒಬ್ಬನಿಗಾಗಿ ಯೋಚಿಸುವ ಮುನ್ನ ನಿಮ್ಮವರ ನೆನಪಿಸಿಕೊಳ್ಳಿ.ಹಾಗೆಂದ ಮಾತ್ರಕ್ಕೆ ನಾನೇನು ಪ್ರೀತಿಯ ದ್ವೇಷಿಯಲ್ಲ.ಪಡೆಯುವ ಮಾರ್ಗ,ಪಡೆದಂತ ರೀತಿ ಒಳ್ಳೆಯದಾಗಿರಲಿ ಅಷ್ಟೇ.ಎಂದೋ ಕಲಿಸಿದ,ಗುರುತರವಾದ ಗುರುವನ್ನೊಮ್ಮೆ, ಜೀವಕ್ಕೆ ಜೀವವಾದ ಗೆಳೆಯರನ್ನೊಮ್ಮೆ, ಕೆಲಸ ದೊರೆಯಲು ಸಹಾಯ ಮಾಡಿ ಜೀವನ ತಿಳಿಸಿದ ವ್ಯಕ್ತಿಗಳನ್ನೊಮ್ಮೆ ನಿಮ್ಮ ಬಿಡುವಿನ ಸಮಯದಲ್ಲೊಮ್ಮೆ ನೆನಪಿಸಿಕೊಳ್ಳಿ. ಒಮ್ಮೆ ಸಂಪರ್ಕಿಸಿ.ಮುಚ್ಚಿಟ್ಟ ಪ್ರೀತಿಯನ್ನೊಮ್ಮೆ ಬಿಚ್ಚಿ ಎಲ್ಲಾರಿಗೂ ನೀಡಿ..ನಿಮ್ಮ ಬದುಕು ಇನ್ನಿಲ್ಲದಂತೆ ಹಸನಾಗುತ್ತದೆ..ಕ್ರತಜ್ನ ನಾದವನು ಕ್ರತಾರ್ಥನಾಗುತ್ತಾನೆ.ಜೀವನದ ಸಾರ್ಥಕತೆಯ ನೆಮ್ಮದಿ ನಿಮ್ಮದಾಗಲಿ.. ಮತ್ತೊಮ್ಮೆ ಮಗದೊಂದು ಲೇಖನದೊಂದಿಗೆ ವಾಪಸ್ಸಗುತ್ತೇನೆ. 

ನಿನಗೂ ಕೂಡ ಹೀಗೆನಾ....!!!!???

[ತುಂಬಾ ದಿನಗಳ ಮೇಲೆ ಬರೆಯುತ್ತಿದ್ದೇನೆ..ಬರೆಯಬೇಕೆಂದು ಕೊಂಡಾಗ ತಟ್ಟನೆ ಮೂಡಿದ ಒಂದಿಷ್ಟು ಸಾಲುಗಳು ಇವು...]


ನೆನಪುಗಳ ಮಾತು ಮಧುರ...
ಪ್ರೀತಿ ಮಧುರ..


ಯಾಕೋ ಬೋರ್ ಅದ ಮನಕ್ಕೆ ನಿನ್ನ ನೆನಪಿನೊಂದಿಗೆ ಬಂದ ಹಾಡು ಇದು..ಹೊರೆಯಾದ ಕೆಲಸದ ನಡುವಿನಲ್ಲೂ ಇಣುಕುವ ನಿನ್ನ ನೆನಪಿಗೆ ನೆನಪಾಗುವವು ಸಾವಿರಾರು ಸಾಲುಗಳು..ನಿನ್ನ ನೆನಪೇ ಹಾಗಿರಬೇಕು..ನೆನಪಾದೊಡನೆ ನಗುವೊಂದು ನನ್ನ ಮೊಗದಲ್ಲಿ..ಮೂಡುವ ಪ್ರತಿ ಕಿರುನಗೆಯಲ್ಲೂ ನಿನ್ನದೇ ಛಾಯೆ..ಅರೆ ಮುಚ್ಚಿದ ಕಣ್ಣುಗಳಲ್ಲಿ ಮೂಡುವುದು ನಿನ್ನ ಪ್ರತಿಬಿಂಬ..ಬೆಳಗ್ಗೆ ಎದ್ದೊಡನೆ ನೀನು ಬರುವ ದಿನ ಹತ್ತಿರವಾಗುವುದೆಂಬ ಭಾವ.. ನನ್ನೊಡನೆ ನೀನು ಇದ್ದಿಯೆಂಬ ಅವಿನಾಭಾವ ಸಂಬಂಧ..ನೋವಿನಲ್ಲೂ  ನಿನ್ನ ನಗೆಗಾಗಿ ಕಾಯುವ ರಾಧೆಯ ಪ್ರೀತಿ..ಯಾಕೋ ತುಂಬಾ ನೆನಪಾಗ್ತಿಯ ಕಣೋ ಎಂದು ಕೂಗಿ ಹೇಳುವ ಮನಸ್ಸು ..ಎಲ್ಲಿ ನನ್ನ ನಾನೂ ಮರೆತು ಬಿಡುತ್ತೇನೋ ಎಂಬ ಸುಂದರವಾದ ಹೆದರಿಕೆ..ದಾರಿಯಲ್ಲಿ ಕೈ ಹಿಡಿದು ನಡೆಯುವ ಜೋಡಿಗಳಲ್ಲಿ ಅರಿವಿಲ್ಲದೆ  ನಮ್ಮ ಕಾಣುವ ಹುಚ್ಚು  ಕಲ್ಪನೆ, ಆ ಕಲ್ಪನೆಗೆ ಅರಿವಿಲ್ಲದೆ ಮೂಡುವ ತುಂಟ ನಗೆ,ಮತ್ತೊಮ್ಮೆ ನಿನ್ನ ಬರುವಿಕೆ ಯನ್ನು ಕಾದು ಕಾದು ಸಾಕಾಗಿ ಬರುವ ಹುಸಿ ಕೋಪ ,ನೀನಿಲ್ಲವೆಂಬ ಶೂನ್ಯವನ್ನು ಅರಗಿಸಿಕೊಳ್ಳಲಾಗದ ಅಸಹನೆ, ನನ್ನ ಸಮಾಧಾನ ಮಾಡುವ ನಿನ್ನ ಮಾತುಗಳು, ಕಣ್ಮುಂದೆ ಬರುವ ನನ್ನನ್ನೇ ಕರಗಿಸಿದ,ಸೆಳೆದ ನಿನ್ನ ತುಂಟ ನೋಟ,ಹೋಗುವಾಗ ದೊರೆತ ನಿನ್ನ ಬಿಸಿಯಪ್ಪುಗೆ,ಅದ ನೆನೆದು ಮೂಡುವ  ಕಣ್ಣೀರು. ನನ್ನ ಹುಚ್ಚು ತನಕ್ಕೆ ಇತರರು ನಕ್ಕಾರೆಂಬ ತವಕ, ನನ್ನ ಮನದ ಅಲ್ಲೋಲ ಕಲ್ಲೋಲವನ್ನು ನಿನ್ನೊಡನೆ ಹೇಳಬೇಕೆಂಬ ಗಡಿಬಿಡಿ, ನಿನ್ನ ಫೋನ್ ಗಾಗಿ ಕಾಯುವ ಕ್ಷಣಗಳು, ನೀನು ಲೈನ್ ನಲ್ಲಿದ್ದಾಗ ಎಲ್ಲಾ ಮರೆತು ನಿನ್ನ ಧ್ವನಿಯನ್ನೇ ಆಲಿಸುವ ನನ್ನ ಹುಚ್ಚುತನ ಹೀಗೆ ಉರುಳುತಿರುವ ದಿನಗಳು..ಕಾಯುತ್ತಿರುವ ಕ್ಷಣಗಳು..ಒಂದೇ ಪ್ರಶ್ನೆ ಕಣೋ ನಿನಗೂ ಕೂಡ ಹೀಗೆನಾ .....???!!!!!!!!!!!

ಹೇಳಿ ಹೋಗು ಕಾರಣ...


ಈ ಜಗತ್ತಿನಲ್ಲಿ ಪ್ರೀತಿ ಮತ್ತು ಸ್ನೇಹ ಹೇಗೆ ಹುಟ್ಟುತ್ತದೆ, ಯಾವಾಗ ಚಿಗುರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ..ಇದೊಂದು ಅರಿಯಲಾಗದ ವಾಸ್ತವ..ಆದರೆ ಒಳ್ಳೆಯ ಸ್ನೇಹವಿದ್ದಲ್ಲಿ ಪ್ರೀತಿ ಮೂಡಿ ಕಲ್ಮಷವಾಗಬಾರದು ಹೀಗೆ ಏನೇನೋ ಆದರ್ಶಗಳನ್ನು ಇಟ್ಟುಕೊಂಡು ತನ್ನದೇ ಕಲ್ಪನಾ ಲೋಕದಲ್ಲಿ ಬದುಕುತಿದ್ದವಳು ಅವಳು..ಅವನು ಕೂಡ ಯಾವದೇ ಹುಡುಗಿಯರ ಗೆಳೆತನವಿಲ್ಲದೆ, ತನ್ನದೇ ಲೋಕದಲ್ಲಿ ವಿರಹಿಸುತ್ತಿದ್ದ..ಹುಡುಗಿಯರೆಂದರೆ ಅವನಿಗೆ ಆಗದು..ಅವರು ಮೋಸ ಮಾಡುವವರು, ಸಮಯ ಸಾಧಕರು ಹೀಗೆ ಅವನದೇ ಹುಚ್ಚು ಪ್ರಪಂಚ..ಅವಳು ಕೂಡ ಒಂದುದಿನವು ಹುಡುಗರನ್ನು ಹತ್ತಿರದಿಂದ ಮಾತನಾಡಿಸಿರಲಿಲ್ಲ..ಹಾಗೆಂದ ಮಾತ್ರಕ್ಕೆ ಅವಳಿಗೆ ಹುಡುಗರ ಬಗ್ಗೆ ಕೆಟ್ಟ ಕಲ್ಪನೆಗಳೆನು ಇರಲಿಲ್ಲ.. ಅವಳು ಬೆಳೆದದ್ದೇ ಹಾಗೆ...ಆದರೆ ವಿಧಿಯ ಮುಂದೆ ಯಾರು ಸಮಾನರಲ್ಲ.. ಅದರ ಇಚ್ಛೆ ಬೇರೇನೆ  ಇರುತ್ತದೆ.

ಈ ಇಬ್ಬರು ಪರಿಚಯವಾಗಿದ್ದು ಹಾಗೇನೆ..ಆಕಸ್ಮಿಕವಾಗಿ ಅನಿವಾರ್ಯವಾಗಿ ಪರಿಚಯ ವಾದವರು..ತಿಳಿದೋ,ತಿಳಿಯದೆನೋ ಅವನಿಗಿದ್ದ ತಪ್ಪು ಕಲ್ಪನೆ ಅವಳ ಸ್ನೇಹದಿಂದ ದೂರವಾಗಿತ್ತು..ತನ್ನ ಮನಸಿನ ಭಾವನೆಯ ಜೊತೆ ಹೆಜ್ಜೆಹಾಕಲು ಆತ್ಮೀಯ ಸ್ನೇಹಿತೆಯ ಅಗತ್ಯ ಅವನಿಗೆ ಅಪ್ಯಾಯಮಾನವಾಗಿತ್ತು...ಅವಳು ಕೂಡ ಅವನ ಸ್ನೇಹದ ಹುಚ್ಚಿನಲ್ಲಿ ಕೊಚ್ಚಿಹೊಗಿದ್ದಳು..ನೋವು,ನಲಿವು,ನಗು ಎಲ್ಲವು ಅವನಿಂದಾಗಿ ಹೊಸ ಅರ್ಥಪಡೆದು ಕೊಂಡಿತ್ತು..ಇಬ್ಬರು ತಮ್ಮ ಸ್ನೇಹವನ್ನು ಗೌರವಿಸುತ್ತಿದ್ದರು..ಜಗತ್ತಿನ ನಿಯಮಗಳಿಗೆ,ಸ್ನೇಹಿತರು ಪ್ರೇಮಿಗಳಾಗುತ್ತರೆಂಬ ಲೋಕೊಕ್ತಿಗೆ ಅವರು ಬಲಿಯಾಗಬರದೆಂದು ಸ್ನೇಹಿತರಾದದಿನವೇ  ತೀರ್ಮಾನಿಸಿದ್ದರು..ಒಂದು ದಿನ ಅವಳೊಂದಿಗೆ ಮಾತನಾಡದಿದ್ದರೆ ಅವ ಮೂಕನಾಗುತ್ತಿದ್ದ..ಅವರು ದಿನ ಕುಳಿತು ಮಾತನಾಡುವ ಸ್ಥಳ ಕೂಡ ಅವರ ಬರುವಿಕೆಯನ್ನು ಕಾಯುತ್ತಿತ್ತು..ಅವನು ಅವಳಿಗೆ ಹೋಲಿಸಿದರೆ ಸ್ವಲ್ಪ ಮೌನಿ..ಆದರೆ ಅವನ ಭಾವನೆಗಳು ಅವಳ ಮಾತಾಗುತ್ತಿದ್ದವು. ಅವನ ದನಿಗೆ ಅವಳು ಕೊರಳಾಗುತ್ತಿದ್ದಳು.ಮೊದಮೊದಲು ಅವನ ಹುಚ್ಚು ಕಲ್ಪನೆ ನೋಡಿ ಅವಳು ನಗುತ್ತಿದ್ದರೆ,ದಿನಕಳೆದಂತೆ ಅದನ್ನು ದೂರಮಾಡುವುದರಲ್ಲಿ ಸಫಲಲಾಗಿದ್ದಳು..

ಆದರೆ ಸಮಾಜ ಹಾಗೆ ಯೋಚಿಸಬೇಕಲ್ಲ..ಅದರ ಕರಿ ನೆರಳು ಬಿದ್ದರೆ ಸಾಕು ಎಂತೆಂಥ ಆತ್ಮಸ್ಥೈರ್ಯವುಳ್ಳವರು ಕೂಡ ನಡುಗಿಹೋಗುತ್ತಾರೆ..ಇವರೇನೋ ತಮ್ಮ ಸ್ನೇಹದಲ್ಲಿ ಪ್ರೀತಿ ಸುಳಿಯದಂತೆ ನೋಡಿಕೊಂಡರೂ ಸುತ್ತಲಿನ ಪರಿಸರ ಹಾಗೆಂದು ಕೊಳ್ಳಲಿಲ್ಲ..ಇವರ ಬಗ್ಗೆ ಮಾತನಾಡಲು ಶುರು ಮಾಡಿದರು. ಅವರು ಯಾವುದರ ಬಗ್ಗು ತಲೆ ಕೆಡಿಸಿಕೊಳ್ಳಲಿಲ್ಲ..ಹಾಗೆಂದು ಹಾಗೆ ಬಿಟ್ಟು ಬಿಡಲು ಆಗಲಿಲ್ಲ ಹುಡುಗಿಯ ಕೈಯಲ್ಲಿ.. ಈ ಸಂಭಂದಗಳ ಪರಿದಿಯಲ್ಲಿ ಯಾವಾಗಲು ಸಿಲುಕಿ ನರಳುವವಳು ಹೆಣ್ಣು ತಾನೇ?..ಅವನು ಇದರ ಬಗ್ಗೆ ತನ್ನೊಡನೆ ಮಾತಾಡುವನೆಂದು ಕಾದಳು.ಏಕೆಂದರೆ ಈ ಗೊಸ್ಸಿಪ್ ಅವನ ಕಿವಿಗೂ ಮುಟ್ಟಿದೆಯೆಂದು ಅವಳಿಗೂ ಗೊತ್ತಿತ್ತು..ಅವನು ಏನೂ ಆಗೇ ಇಲ್ಲ ಎನ್ನುವಂತಿದ್ದ..ಅವಳಿಗೂ ಅವನ ಅತಿಯಾದ ಕಾಳಜಿಯ ಮೇಲೆ, ಅವನ ಭಾವನೆಯ ಮೇಲೊಮ್ಮೆ ಅನುಮಾನ ಮೂಡಿತು..ಅನುಮಾನ ಎನ್ನುವದಕ್ಕಿಂತ ಕೂತುಹಲ..ಅವನ ಮನಸ್ಸೇನಾದರೂ ತನ್ನೆಡೆಗೆ ಜಾರುತ್ತಿದೆಯೇ? ಸ್ನೇಹದಲ್ಲಿ ಅಪಾರವಾದ ನಂಬಿಕೆ ಇಟ್ಟವಳು..ಸದಾ ತನ್ನ ಆದರ್ಶದ ಬಗ್ಗೆ ಹೇಳುತ್ತಿದ್ದ ಅವಳಲ್ಲಿ ತನು ಸಣ್ಣವನಾದೆನೆಂಬ ಭಾವನೆ ಬಂದು ಹೇಳುತ್ತಿಲ್ಲವೇ.. ? ಹೀಗೆ ಉತ್ತರ ಸಿಗದ ಪ್ರಶ್ನೆಗಳಿಗೆ ಸೋತಳು..ಕೊನೆಗೂ ಧೈರ್ಯ ಮಾಡಿ ಅವನಲ್ಲಿ ಕೇಳಿದಳು..ಅವನು ಇವಳ ಮಾತಿಗೊಮ್ಮೆ ನಕ್ಕ..ತಿರುಗಿ ಅವಳಿಗೆ ಕೇಳಿದ್ದು ಒಂದೇ ಪ್ರಶ್ನೆ "ನಿನಗೇ ನನ್ನಲ್ಲಿ ನಂಬಿಕೆ ಇಲ್ಲವೇ?"..ಅವಳು ಉತ್ತರಕ್ಕಾಗಿ ತಡಕಾಡಿದಳು..ನಿಜವೆಂದರೆ ಅವಳು ಅವನ ಮನವನ್ನು ಬಲ್ಲಳು..ಆದರು ಹುಚ್ಚು ಮನಸು..ಒಂದೇ ಮಾತಾಡಿದ.."ನಿನ್ನ ಮೇಲೆ ಆ ಭಾವನೆ ಬಂದ ದಿನ,ನಮ್ಮ ಆದರ್ಶಗಳನ್ನು ಬದಿಗೊತ್ತಿ ಹ್ರದಯ ನಿನ್ನ ಬಯಸಿದ ಕ್ಷಣ, ನಾನು ನಿನಗೆ ಮುಖತೊರಿಸದೆ ನಿನ್ನ ಬದುಕಿಂದ ದೂರ ನಡೆಯುತ್ತೇನೆ.." ದಿನಗಳು ಉರುಳಿದವು.. ಜನ ಇವರನ್ನು ಮರೆತರು..ಯಾವ ಪರಿವೆ ಇಲ್ಲದೆ ಇವರ ಸ್ನೇಹ ಮುಂದುವರೆಯಿತು..ಒಂದೊಮ್ಮೆ ಅವ ಸ್ನೇಹಿತರೊಡನೆ ಆಗ್ರಾಕ್ಕೆ ಪ್ರವಾಸ ಹೊರಟ.. ಹೋಗುವ ಹಿಂದಿನ ದಿನ ಅವಳಲೋಮ್ಮೆ ಮನಸ್ಸು ಬಿಚ್ಚಿ ಗಂಟೆಗಟ್ಟಲೆ ಎಂದಿನಂತೆ ಮಾತಾಡಿದ..ಇವಳು ಸಣ್ಣ ಹುಡುಗಿಯಂತೆ ಅದು ಬೇಕು ಇದು ಬೇಕು ಎಂದು ತನ್ನ ಕೋರಿಕೆಯ ಪಟ್ಟಿಯನ್ನು ಅವನ ಮುಂದಿಟ್ಟಳು..ಎಲ್ಲಾ ತರುವುದಾಗಿ ಅವನೂ ಮಾತುಕೊಟ್ಟ..ಸಂತೋಷದಿಂದ ಅವನನ್ನು ಬಿಳ್ಕೋಟ್ಟಳು.
ಆದರೆ ಹೋದವನು ತಿರುಗಿ ಬಂದರು ಇವಳನ್ನು ಮಾತನಾಡಿಸಲಿಲ್ಲ..avoid ಮಾಡ ತೊಡಗಿದ..ಆಮೇಲೆ ಹೇಳದೆ ಇವಳನ್ನು ಬಿಟ್ಟು ಬೇರೆ ಊರಿಗೆ ಹೋದ..ಕಾರಣ ತಿಳಿಯದೆ ಪರದಾಡಿದಳು..ಎಲ್ಲಿ ತಪ್ಪಾಯಿತೆಂದು ಅರಿಯದಾದಳು...ಪದೆ ಪದೆ ಅವನ ಮಾತೇ ಪ್ರತಿಧ್ವನಿಸುತ್ತಿತ್ತು "ನಿನ್ನ ಮೇಲೆ ಆ ಭಾವನೆ ಬಂದ ದಿನ,ನಮ್ಮ ಆದರ್ಶಗಳನ್ನು ಬದಿಗೊತ್ತಿ ಹ್ರದಯ ನಿನ್ನ ಬಯಸಿದ ಕ್ಷಣ ,ನಾನು ನಿನಗೆ ಮುಖತೊರಿಸದೆ ನಿನ್ನ ಬದುಕಿಂದ ದೂರ ನಡೆಯುತ್ತೇನೆ.." ಮತ್ತೆ ಅವಳಲ್ಲಿ ಉಳಿದಿದ್ದು ಅದೇ ಉತ್ತರ ಸಿಕ್ಕದ ಪ್ರಶ್ನೆಗಳು.. ಅವನಿಗೆ ತನ್ನ ಮೇಲಿದ್ದುದು ಸ್ನೇಹಾನ ಇಲ್ಲ ಪ್ರೀತಿನಾ ?.. ತನ್ನ ಆದರ್ಶಗಳ ಹೆಸರಿನಲ್ಲಿ ತಾನು ಕಳೆದುಕೊಂಡಿದ್ದು ಒಳ್ಳೆ ಪ್ರೀತಿನಾ ಅಥವಾ ಉಳಿಸಿಕೊಳ್ಳಲು ಹೋಗಿ ಕಳೆದುಕೊಂಡ ಸ್ನೇಹಾನ? ಇದರಲ್ಲಿ ಜಯ ಯಾವುದಕ್ಕೆ ತಿಳಿಯದೆ ಹುಟ್ಟಿದ ಪ್ರೀತಿಗೋ ? ಸ್ನೇಹಕ್ಕೋ ? ತಾನು ನಿಜವಾಗಿಯೂ ಗೆದ್ದೆನೆ? ಅಥವಾ ಈ ಗೆಲುವು  ಈ ಆದರ್ಶಗಳಿಗೆ ಕಾರಣವಾದ ಸಮಜದ್ದಾ?

ಹೀಗೊಂದು ಆಟೋಗ್ರಾಪ್..

ಮೊನ್ನೆ ಮೊನ್ನೆ ಮನೆಗೆ ಹೋದಾಗ ಜೋಪಾನವಾಗಿ ತೆಗೆದಿರಿಸಿದ್ದ ನನ್ನ ಆಟೋಗ್ರಾಪ್  ಬುಕ್  ನ ಮೇಲೊಮ್ಮೆ ಮಮತೆಯಿಂದ ಕೈಯಾಡಿಸಿ ಮೊದಲಬಾರಿ ಓದುತ್ತಿರುವೇನೋ ಎನ್ನುವಂತೆ ಕುಳಿತು ಓದತೊಡಗಿದೆ..ಈ ಆಟೋಗ್ರಾಪ್ಗಳೇ ಹಾಗೆ ಎಷ್ಟು ಬಾರಿ ಓದಿದರೂ ಮೊದಲಸಾರಿ ಓದುತ್ತಿರುವ ಕೂತುಹಲವನ್ನೇ ಬಚ್ಚಿಟ್ಟು ಕೊಂಡಿರುತ್ತವೆ.ನಾನು ನನ್ನ ಎಲ್ಲಾ ಶಾಲೆ,ಕಾಲೇಜ್ ಗಳಲ್ಲಿ  ತಪ್ಪದೆ maintain ಮಾಡಿದ ಬುಕ್ ಎಂದರೆ ಇದೆ ಇರಬೇಕು..ಬಣ್ಣ ಬಣ್ಣದ ಪೆನ್ಸಿಲ್ ಗಳಿಂದ,ಚಿತ್ರಗಳಿಂದ ಕೂಡಿದ ಪುಸ್ತಕ ಓದುವುದೆಂದರೆ ,ಅದರಲ್ಲೋ ಎಲ್ಲಕ್ಕಿಂತ ಮಿಗಿಲಾಗಿ ಬಣ್ಣದ ದಿನಗಳ ನೆನಪನ್ನು ಹೊತ್ತ ಪುಸ್ತಕ ಎಂದರೆ ಯಾರು ತಾನೇ ಓದಲು ಇಷ್ಟಪಡುವುದಿಲ್ಲ ಹೇಳಿ...ನಮ್ಮ ಆತ್ಮೀಯರೂ,ನೆನಪನ್ನು ನಮ್ಮಜೊತೆ ಹಸಿರಾಗಿರುವಂತೆ ಮಾಡಿರುವ,ಕೈ ಅಕ್ಷರಗಳಲ್ಲಿ ತಿದ್ದಿ,ತೀಡಿ ಬರೆದ ಆ ಪುಸ್ತಕ ಈಗಿನ SMS,CHATTING,MAIL ಯಾವದಕ್ಕೂ ಸಮನಾಗಲಾರದು..ಓದು ಓದುತ್ತಿರುವಂತೆ ಒಬ್ಬೊಬ್ಬರು ನನ್ನ ವ್ಯಕ್ತಿತ್ವವನ್ನು ವಿವರಿಸಿದ ರೀತಿ,ನಾವು ಮಾಡುತ್ತಿದ್ದ ಚೆಸ್ಟೆಗಳು,ಬೇಸರಿಸಿಕೊಂಡು ಮಾತು ಮರೆತ ಕ್ಷಣಗಳೂ ಮತ್ತೊಮ್ಮೆ ನನ್ನ ಆ ದಿನಗಳಿಗೆ ಕರೆದೊಯ್ದವು..ಶಾಲೆಯ ಕೊನೆಯದಿನಗಳಲ್ಲಿ ನಮಗೆ ಓದುವುದನ್ನು ಬಿಟ್ಟು ಆಟೋಗ್ರಾಪ್ ಬರೆಯುವದೇ ಒಂದು ದೊಡ್ಡ ಕೆಲಸ..ಮನೆಯಲ್ಲಿ ಎಷ್ಟೋ ಬಾರಿ ಬೈದಿದ್ದಾರೆ..ಅಂದೆನಾದರೂ ನಾವು ಬರೆಯದೆ ಎದ್ದರೆ ಎಂತಹ ಸುಂದರ ಪುಸ್ತಕವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಎಂದು ಅನಿಸಿದ್ದಿದೆ..ಎಲ್ಲೋ ಒಂದುಕಡೆ ನನ್ನಲ್ಲೇ ಅದ ಬದಲಾವಣೆ ಏನೆಂಬುದಕ್ಕೆ ಕನ್ನಡಿ
ಹಿಡಿದಂತಿದೆ..ಮತ್ತೊಮ್ಮೆ ಆ ದಿನಗಳಿಗೆ ಮರಳುವ ಮನಸಾಗಿದೆ.. ಬಿಡುವಿರದ ಬದುಕಿನಲ್ಲಿ ಎಷ್ಟೋ ಚಿಕ್ಕ ಪುಟ್ಟ ವಿಷಯಗಳನ್ನೆಲ್ಲ ನಮ್ಮ ಸ್ಮ್ರತಿ ಪಟಲದಿಂದ ಸರಿಸಿರುತ್ತೇವೆ..ಇಂತಹ ಪುಸ್ತಕಗಳಿಂದ ನಾವು ಮರೆತ ಆ ಕ್ಷಣಗಳ ನೆನಪಾದಾಗ ಒಂದೊಮ್ಮೆ ಅತ್ತರೆ ನಮಗರಿವಿಲ್ಲದಂತೆ ನಗು ಉಕ್ಕುತ್ತದೆ..
ಜೀವನದಲ್ಲಿ ಪ್ರತಿಯೊಬ್ಬರೂ ಬೆಳೆದಂತೆ,ಅವಶ್ಯಕತೆಗಿಂತ ಜಾಸ್ತಿ ಬದಲಾದಂತೆ,ಮತ್ತೆ ಮತ್ತೆ ನಮ್ಮನ್ನು ನಮಗೆ ನೆನಪಿಸುವವು ಇಂತಹ ಪುಸ್ತಕಗಳು..ಕೇವಲ ಅವು ಪುಸ್ತಕಗಳಾಗಿರದೆ ಜೀವಂತಿಗೆಯ ಬರಹಗಳಾಗಿ ನಮ್ಮಡೋನೆ ಇರುತ್ತವೆ..ಮುಗ್ದತೆಯ ಬರಹದಲ್ಲೊಮ್ಮೆ ಅಲ್ಲಲ್ಲಿ ಇಣುಕುವ ವೈಚಾರಿಕತೆಯ ವಿಮರ್ಶಿಸುವ ಮಾತುಗಳು...ಎಲ್ಲರೂ ನಿಮ್ಮಲ್ಲಿ ಇಂತಹ ಪುಸ್ತಕಗಳಿದ್ದರೆ ಒಮ್ಮೆ ತೆರೆದು ನೋಡಿ.. ಮರೆತಿರುವ ಚಿಕ್ಕ ಪುಟ್ಟ ವಿಷಯಗಳನ್ನು ನೆನಪಿಸಿಕೊಳ್ಳಿ..ನಿಮ್ಮ ಹಳೆಯ ಸ್ನೇಹಿತರನ್ನ ಮತ್ತೆ ನೆನಪಿಸಿಕಕೊಳ್ಳಿ.. ಅವರನ್ನ ಸಂಪರ್ಕಿಸಿ..ನಿಮ್ಮಲ್ಲೊಮ್ಮೆ ಹೊಸ ಉತ್ಸಾಹ ಉಂಟಾಗಿ ಮನಸ್ಸು ಪ್ರಪುಲ್ಲವಾಗಿ ಅರಳುತ್ತದೆ...ಮತ್ತೊಮ್ಮೆ ಮತ್ತೊಂದು ಬರಹದೊಂದಿಗೆ ವಾಪಾಸ್ಸಗುತ್ತೇನೆ...ಮತ್ತೆ ಹೊಸ ನೆನಪುಗಳೊಂದಿಗೆ.,ಆಶಯದೊಂದಿಗೆ...

ಬಂದಿತು ಮಳೆಗಾಲ..ನೆನಪಾಗುತ್ತಿದೆ ನನ್ನ ಬಾಲ್ಯ....

ಮುಂಗಾರಿನ  ಅಭಿಷೇಕಕೆ ಮೆದುವಾಯಿತು ನೆಲವು 
ಸಂಜೆಯಾಯಿತೆಂದರೆ ಸುರಿಯುವ ಮಳೆ, ತುಂಬಿ ತುಳುಕುವ ರಸ್ತೆಯ ಇಕ್ಕೆಲಗಳು, ಸಾಲದೆಂಬಂತೆ ರಸ್ತೆಯ ಮೇಲೂ ನೀರು, ಹೆಜ್ಜೆಯಿಡಲೂ ಹೇಸಿಗೆಯಾಗುವಂತೆ ರಸ್ತೆಯಲ್ಲಿ ಕೊಳಚೆ, ಓಲಾಡಿಕೊಂಡು ಸಾಗುವ ಬಸ್ಸು,ಮಾರು ಮಾರಿಗೆ trafiic ಜಾಮ್, ನಾನು ಹೇಳಹೊರಟಿರುವುದು ಬೆಂಗಳೂರಿನ ಮಳೆಗಾಲವನ್ನಲ್ಲ.!!!!!!! ನನ್ನ ನೆನಪಿನಲ್ಲಿ ಬೆರೆತುಹೋದ ನನ್ನ ಬಾಲ್ಯದೊಂದಿಗೆ ಬೆಸೆದುಹೋದ  ಸುಂದರ ಮಲೆನಾಡಿನ ಮಳೆಗಾಲವನ್ನು..ಹೌದು ನಾನು ಹುಟ್ಟಿದ್ದೇ ಹಸಿರು ಹಾಸಿಗೆಯನ್ನು ಹಾಸಿ,ಸೌಂದರ್ಯವನ್ನು ತನ್ನ ಒಡಲಾಳದಲ್ಲಿ ಬಚ್ಚಿಟ್ಟುಕೊಂಡಿರುವ,ಆಕಾಶಕ್ಕೆ ಏಣಿ ಹಾಕುವಂತೆ ಬೆಳೆದ ಅಡಿಕೆ ಮರಗಳು,ಮೆಣಸು,ಏಲಕ್ಕಿಯ ಪರಿಮಳ ಉಸಿರಾಡುವ,ಉತ್ತರ ಕನ್ನಡವೆಂಬ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ..ನನ್ನ ಬಾಲ್ಯದ ನೆನಪು ನನ್ನಲ್ಲಿ ಇಂದಿಗೂ ಹಸಿರು..ನನ್ನೊಬ್ಬನದಲ್ಲ ಅಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರೂ ಅವರ ಬಾಲ್ಯದ ಮಳೆಗಾಲವನ್ನು ಮರೆತಿರಲಾರರು.ಒಂದೆಡೆ ತುಂಬಿ ಹರಿಯುವ ಅಘನಾಶಿನಿ,ಅದರ ನೀರನ್ನು ಉಂಡು ಸೊಂಪಾಗಿ ಬೆಳೆದ ಬತ್ತದ  ಗೆದ್ದೆಗಳು,ಜಲಪಾತದ ಸೊಭಗನ್ನು ನೆನಪಿಸುವ ಸಣ್ಣ ಝಾರಿಗಳು ಇವೆಲ್ಲದರ ನಡುವೆ ಕಳೆದ ನನ್ನ ಬಾಲ್ಯ..
ನಾವೆಲ್ಲ ಶಾಲೆಗೆ ಹೋಗುತ್ತಿದ್ದ ದಿನಗಳು..ಶಾಲೆಯೆಂದರೆ ಇಲ್ಲಿನವರಂತೆ ರಿಬೂಕ್ ಶೂ,ಬೆಲೆಬಾಳುವ uniform ಗಳು,ಒಂದು ರಾಶಿ ಪುಸ್ತಕಗಳು, ತಲೆ ಹತ್ತಿ ಕುಳಿತ ಒತ್ತಡ ಇವೆಲ್ಲ ನಮ್ಮದಾಗಿರಲಿಲ್ಲ.ಮಳೆಗಾಲಕ್ಕೆಂದೇ ತೆಗೆದುಕೊಂಡು ಎರಡು ವರ್ಷ ಜೋಪಾನ ಮಾಡಿದ ಚಪ್ಪಲ್ಲುಗಳು,ನೀಲಿ ಅಂಗಿ,ಬಿಳಿ ಬ್ಲೌಸ್, ಉದ್ದ ಕೋಲಿರುವ ಕಪ್ಪು ಕೊಡೆ, ಪೂರ್ತಿ ಒದ್ದೆಯಾಗುತ್ತಿದ್ದ ಪಾಟಿಚೀಲ,ದೂರದ ಕಾಲುಹಾದಿ ಹೀಗೆ ನಮ್ಮದೇ ಲೋಕ.ಅಲ್ಲೆಲ್ಲ ಮಳೆಗಾಲವೆಂದರೆ ತೋಟದಲ್ಲಿ ಬೆಳೆಯುತ್ತಿದ್ದ ಒಂದುಜಾತಿಯ ಗಿಡ ನಮ್ಮೆಲ್ಲರ ಪಾಲಿಗೆ ಸ್ಲೇಟ್ ಒರೆಸುವ ಮಾಧ್ಯಮ.ಅದನ್ನು ಕೊಯ್ದು,ಕವರ್ ನಲ್ಲಿ ತುಂಬಿ ಶೇಕರಿಸಿ ಇಡುತ್ತಿದ್ದೆವು.ಅರ್ಧದಿನ ಶಾಲೆಗೆ ರಜೆ ಜೋರು ಮಳೆಯಿಂದಾಗಿ.ಸಂಜೆ ಯಾಯ್ತೆಂದರೆ ಸುಡುತ್ತಿದ್ದ ಹಲಸಿನ ಬೇಳೆ(ಮಳೆಗಾಳಕ್ಕೆಂದೇ ಅಲ್ಲಿಯ ಜನ ಶೇಕರಿಸಿ ಇಡುತ್ತಾರೆ),ಗೇರು ಬೀಜ.ದೀಪದ ಬೆಳಕಿನಲ್ಲಿ ಕುಳಿತು ಮನೆಯವರೆಲ್ಲ ಸವಿಯುತ್ತಿದ್ದೆವು.ಆ ಕಾಲಕ್ಕೆ ಸರಿಯಾಗಿ ಬೆಟ್ಟದಲ್ಲಿ ಬಿಡುತ್ತಿದ್ದ ಚಳ್ಳೆ ಹಣ್ಣು, ಪಿಳ್ಳೆ ಹಣ್ಣು, ಊರಿನ ಮಕ್ಕಳೆಲ್ಲ ಶನಿವಾರ ಭಾನುವಾರ ಅದರ ಹುಡುಕಾಟದಲ್ಲೇ..ಓದು ನಮ್ಮ ಪಾಲಿಗೆ ಏನಿದ್ದರೂ secondary.ಹೊರಗಡೆ ಬರಲಾರದಷ್ಟು ಮಳೆ ಸುರಿಯುತ್ತಿದ್ದರೆ,ಮನೆಯ ಮುಂದಿನ ಕಾಲುವೆಯಲ್ಲಿ ನಾವು ದೋಣಿ ಬಿಡುತ್ತಿದ್ದೆವು.ಆ ದಿನಗಳನ್ನು ನಾನು ತುಂಬಾ ನೆನಪಿಸಿ ಕೊಳ್ತಿನಿ.
ಶಾಲೆಯೂ ಬದಲಾಯಿತು.ದಿನ ಬಸ್ಸಿನಲ್ಲಿ ಪ್ರಯಾಣ.ಮಳೆಗಾಲದಲ್ಲಿ ಮರೆಯಾಗುತ್ತಿದ್ದ ನಮ್ಮೂರ ಬಸ್ಸು ಆಗೊಮ್ಮೆ ಈಗೊಮ್ಮೆ ಮುಖ ತೋರಿಸಿದರೆ ನಮ್ಮ ಪುಣ್ಯ..ಆ ದಿನ ನಮ್ಮದು ಕಾಲು ನಡಿಗೆಯಲ್ಲೇ 7km ಪ್ರಯಾಣ..ಆ ದಿನ ಅರ್ಧ ಶಾಲೆ ನಮ್ಮ ನಡಿಗೆಯಲ್ಲೇ ಮುಗಿದಿರುತ್ತಿತ್ತು..ಇನ್ನೊಂದಷ್ಟುದಿನ ಅಘನಾಶಿನಿ ತನ್ನ ಒಡಲನ್ನು ತುಂಬಿ ಹರಿದು ದಾರಿಯನ್ನು ಮುಚ್ಚಿ ಬಿಡುತ್ತಿತ್ತು..ಆದರೂ ಅದರ ಸೌಂದರ್ಯವನ್ನು ನೋಡಲು ನಾವು ಹೋಗುತ್ತಿದ್ದೆವು..ಸುತ್ತ ಮುತ್ತಲಿನ ಹಳ್ಳಿಗೆ ಇರುವುದೊಂದೇ ಹೈಸ್ಕೊಲ್ .ನಮ್ಮ ಊರಿನ ಬಸ್ಸು ಶಾಲೆಯ ಮಕ್ಕಳಿಂದಲೇ ತುಂಬಿ ಬಿಡುತ್ತಿತ್ತು..ದಿನ ಇತರ ಪ್ರಯಾಣಿಕರಿಂದ ಬೈಗುಳ ಇದ್ದಿದ್ದೆ ನಮಗೆ..ಆ ದಿನಗಳು ತುಂಬಾ ಸುಂದರ ವಾಗಿದ್ದವು ನಮ್ಮ ಪಾಲಿಗೆ..
ಮಳೆಬಂದರೆ ನೆನೆಯಬಾರದೆಂದು ಬಸ್ಸಸ್ಟ್ಯಾಂಡ್ ನಲ್ಲಿ ಕೊಡೆ ಹಿಡಿದು ಕಾಯುತ್ತಿದ್ದ ಅಪ್ಪ ಇಲ್ಲಿ ನಾನು ಕೊಡೆ ಮರೆತು ಮಳೆಯಲ್ಲಿ ನೆನೆದು ಮನೆ ತಲುಪುವಾಗ ನೆನಪಾಗುತ್ತಾರೆ.ಕುರು ಕುರು ತಿಂಡಿ ಮಾಡಿ ಬಾಗಿಲಲ್ಲೇ ನನ್ನ ಕಾಯುತ್ತಿದ್ದ ಅಮ್ಮ ಇಂದು ಹಸಿವೆ ಇಂದ ಬೇಯುವಾಗ ಕಾಡುತ್ತಾರೆ..ಸಮಯದ ಪರಿವೆಯೇ ಇಲ್ಲದೆ ಬೆರೆಯುತ್ತಿದ್ದ ನನ್ನ ಸ್ನೇಹಿತರು ಮುಂಗಾರಿನ ಮಳೆಯಲ್ಲೊಮ್ಮೆ ನೆನಪಾಗುತ್ತಾರೆ..ಪುಟ್ಟ ಪುಟ್ಟ ಚಪ್ಪಲ್ಲುಗಳು,ಉದ್ದ ಕೋಲಿನ ಕೊಡೆ ನನ್ನ ಅಣಕಿಸುತ್ತವೆ.ಚಳ್ಳೆ ಪಿಳ್ಳೆ ಹಣ್ಣುಗಳು ನೆನಪಾಗಿ ಬಾಯಲ್ಲಿ ನೀರು ತರಿಸುತ್ತವೆ..ಒಟ್ಟಿನಲ್ಲಿ ನಮ್ಮೂರ ಮಳೆಗಾಲವನ್ನು ನಾನು ತುಂಬಾ  miss ಮಾಡಿ ಕೊಳ್ಳುತ್ತಿದ್ದೇನೆ.

ಈ ಬಾರಿ ಮನೆಗೆ ಹೋದಾಗ ನಾನು ಮತ್ತೆ ನನ್ನ ಫ್ರೆಂಡ್ ರಾಘಣ್ಣ ಸುರಿವ ಮಳೆಯಲ್ಲಿ ವಯಸ್ಸಿನ್ನು ಮರೆತು ಕೊಡೆ ಹಿಡಿದು ಹಳ್ಳಕ್ಕೆ ನೀರಾಡಲು ಬಂದಾಗ ಪಕ್ಕದ ಮನೆಯ ರಾಧಕ್ಕ ಮಗಳಿಗೆ "ನೋಡು ಕೂಸೇ ಅವು ದೊಡ್ಡ ನೌಕರಿ ಅಲ್ಲಿದ್ರು ಎಷ್ಟು ಸಿಂಪಲ್ ಇದ್ದ,ನೀನು ಕಾಲೇಜ್ ಗೆ ಹೊಪಲೆ ಹಣಕಿ ಎರಡು ವರ್ಷ ಆಗಿದ್ದೆ ತಡ ಭೂಮಿ ಮೇಲೆ ಇಲ್ಲೇ" ಎಂದಾಗ ನಮಗೆ ಕೂಗಿ ಹೇಳಬೇಕು ಎಂದು ಅನ್ನಿಸಿತ್ತು..
"ಬಂದಿತು ಮಳೆಗಾಲ..ನೆನಪಾಗುತ್ತಿದೆ ನನ್ನ ಬಾಲ್ಯ..."

ಹಾಗೆ ಸುಮ್ಮನೆ...

ಹಾಯ್
ಏನೆಂದು  ಕರೆಯಲಿ  ನಿನ್ನ?? ಚಿನ್ನ ಎನ್ನಲೇ,ಮುದ್ದು ಎನ್ನಲೇ,ಗೆಳೆಯ ಎನ್ನಲೇ....?? ಅಥವಾ ಹೆಸರಿಂದಲೇ ಹಿಡಿದು ಸಂಭೋದಿಸಲೇ...??? ಸುಮ್ಮನೆ ಹಾಯ್  ಎಂದೆನೆಂದು ಬೇಸರ ಮಾಡಿ  ಕೊಳ್ಳಬೇಡ.ನೀನು ನನ್ನವನಾದ ಮೇಲೆ ಇಡಿ ಜಗತ್ತಿನ ಎಲ್ಲಾ nickname ಗಳನ್ನೂ ನಿನಗೇ ಇಟ್ಟುಬಿಡುತ್ತೇನೆ. ಹೇಗಿದ್ದೀಯ? ತುಂಬಾ ದಿನದಿಂದ ನಿನಗೊಂದು ಪತ್ರ ಬರಿಯಬೇಕೆಂದು ಅಂದು ಕೊಳ್ಳುತ್ತಿದ್ದೆ.. ಕೆಲಸದ ಒತ್ತಡ ದಲ್ಲಿ ಆಗಲೇ ಇಲ್ಲ..ಇಂದಾದರೂ ಬರಯಲೇ ಬೇಕೆಂದು ಕುಳಿತು ಕೊಳ್ಳುತ್ತಿದ್ದಂತೆ ನೋಡು ನನ್ನ ಮನಸ್ಸಿನ ಮಾತುಗಳೆಲ್ಲ ಸುಂದರ ಅಕ್ಷರಗಳಾಗಿ ಮೂಡುತ್ತಿವೆ.ಮುಸ್ಸಂಜೆ ಮಳೆಯಂತೆ ಬಂದ ನಿನ್ನ ನೆನಪು ಸುರಿದು ಭೂಮಿಯಲ್ಲಿ ಇಂಗಿ ಹೋಗುವುದಕ್ಕಿಂತ ಮೊದಲು ಅದನ್ನು ಬೊಗಸೆಯಲ್ಲಿ ಹಿಡಿದು ನಿನ್ನ ಮುಂದಿಡುವಾಸೆ...ಪೂರಕವೋ ಎಂಬಂತೆ ಸಂಜೆಯ ಸೋನೆಮಳೆ ಸುರಿಯುತ್ತಲಿತ್ತು..ಬಸ್ಸನ್ನೇರಿ ನನ್ನ ಮೆಚ್ಚಿನ ಸೀಟ್ ನ ಕಿಟಕಿಕಯ ಪಕ್ಕ ಕುಳಿತು  ಆ ತಂಪು ಗಳಿಗೆ ಮುಖ ನೀಡಿದೆ ನೆಂದರೆ ನನ್ನನ್ನೇ ನಾನು ಮರೆತು ಬಿಡುತ್ತೇನೆ. ನನ್ನ ಜೀವನದಲ್ಲಿ ಬರುವುದಕ್ಕಿಂತ ಮೊದಲು ಯಾವ ಹುಡುಗರ ಬಗ್ಗೂ ತಲೆ ಕೆಡಿಸಿಕೊಂದವಳಲ್ಲ ನಾನು..ಹಾಗೆಂದ ಮಾತ್ರಕ್ಕೆ  ನನಗೆ ಹುಡುಗರಲ್ಲಿ ಸ್ನೇಹಿತರೂ ಇಲ್ಲವೆಂದಲ್ಲ.ಹಲವಾರು ಜನ ಆತ್ಮೀಯರಿದ್ದಾರೆ.ಆದರೆ ನಿನ್ನ ಬಗ್ಗೆ ಸೆಳೆತ ಉಂಟಾಗಿದ್ದುನಾನುನಿನ್ನಬಗ್ಗೆಯೋಚಿಸಲು ಆರಂಬಿಸಿದಮೇಲೆ.ಮನಸೋಮ್ಮೆ  ಹೇಳಿತ್ತು  ನೀನ್ಯಾಕೆ  ಅವನ  ಬಗೆಗೊಮ್ಮೆ  ಯೋಚಿಸ  ಬರದು  ಅಂತ.
ಅದಕ್ಕಿಂತ ಮೊದಲು  ಯಾವಾಗಲೂ ನೀನು ನನ್ನ ಕೇಳಿಕೊಳ್ಳುತ್ತಿದ್ದೆ
 "ನನ್ನ ಬಗ್ಗೆ ಸ್ವಲ್ಪ ಯೋಚಿಸಮ್ಮ " ಎಂದು.ನಾನು ಆ ಪ್ರಯತ್ನವನ್ನೇ ಮಾಡಿರಲಿಲ್ಲ.ಆದರೆ ಅಂದೇಕೋ ನನ್ನ ಮನದಲ್ಲಿ ನೀನು ಸುಳಿದಾಡುತ್ತಿದ್ದೆ. ಮೊದಲ ಬಾರಿ ನಿನ್ನೊಂದಿಗೆ ನಾನು ಮಾತನಾಡಿದಾಗ ನನ್ನ ಮನ ಗೊತ್ತಿಲ್ಲದೇ ನನಗೆ ಹೇಳಿತ್ತು ನೀನು ನಿನ್ನ ಹುಡುಗಿಗೆ comfortನೀಡಬಲ್ಲೆ ಅಂತ...ನಿನ್ನ  ಭೇಟಿ ಕೆಲವೇ  ನಿಮಿಷದಲ್ಲಗಿದ್ದರೂ ನೀನು  ನನ್ನ  ತುಂಬಾ  ಹಚ್ಚಿಕೊಂಡು  ಬಿಟ್ಟಿದ್ದೆ…


ಅದಕ್ಕೆ ತಾನೇ ನೀನು  ಅದನ್ನು  ಹೇಳಲು  ಎಷ್ಟೊಂದು  ಹರಸಾಹಸ  ಮಾಡಿದ್ದು… ಮೊನ್ನೆ  ಕೊನೆಗೂ  ಧೈರ್ಯ  ಮಾಡಿ  ರಾತ್ರಿ  12 ಗಂಟೆಗೆ   ಫೋನ್  ಮಾಡಿದ್ದು … ನಿನ್ನ  ಸ್ವರವನ್ನ  ಮೊದಲ  ಬಾರಿ  ಫೋನ್ ನಲ್ಲಿ  ಕೇಳಿದ್ದೆ  ಆಗ… !! ನಿನ್ನ  ಧ್ವನಿ  ನಡಗುತ್ತಿದ್ದರೆ ನಾನು  ನಗುತ್ತಿದ್ದೆ.. ಹೇಳಲೋ  ಬೇಡವೋ  ಎಂದು  ಪರದಾಡಿ  ಕೊನೆಗೂ  ನನಗೆ  ತಿಳಿಸಿ  ಬಿಟ್ಟಿದ್ದೆ… ಹುಡಗನೋಬ್ಬನಿಂದ propose ಮಾಡಿಸಿ  ಕೊಳ್ಳುವುದು  ಹೊಸತೇನಲ್ಲ  ನನಗೆ …ನಾನೇನೂ  ಹೇಳದೆ  ಮೌನವಾಗಿ  ಬಿಟ್ಟಿದ್ದೆ .. ನೀನು  ಕಾಯುತ್ತೇನೆಂದು  phone ಇಟ್ಟು  ಬಿಟ್ಟಿದ್ದೆ …ಆದರೆ  ನಿನ್ನಲ್ಲೇನೋ  ಸೆಳೆತ  ಕಂಡಿದ್ದು  ಆವತ್ತು  ನಾನು  ನಿನ್ನ  ಬಗ್ಗೆ  ಯೋಚಿಸಲು  ಶುರು  ಮಾಡಿದಾಗ…


ನಾನು ಬಯಸುವ ಎಲ್ಲಾ ಗುಣಗಳು ನಿನ್ನಲ್ಲಿದ್ದವು.ಓದು,ಒಳ್ಳೆಯ ಕೆಲಸ,ಸ್ವಲ್ಪ ಹೆಚ್ಚೇನೋ ಎನ್ನುವ ತುಂಟತನ,ರೆಪ್ಪೆಯಲ್ಲಿ ಮುಚ್ಚಿತ್ತು ಕಾಯುವಷ್ಟು ಪ್ರೀತಿ, ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಗುಣ , ಎಲ್ಲಾ ...ಒಬ್ಬ ಹುಡುಗಿ ಬಯಸುವ ಎಲ್ಲಾ ಗುಣಗಳು ನಿನ್ನಲ್ಲಿದ್ದವು.ನಿನ್ನ ಬೇಡ ಎನ್ನಲೂ ನನ್ನಲ್ಲಿ ಕಾರಣಗಳೇ ಇರಲಿಲ್ಲ ಕಣೋ..ಆದರೂ ನನ್ನದೊಂದಷ್ಟು ಚಿಕ್ಕ ಪುಟ್ಟ ಆಸೆ ಗಳಿವೆ.ಸುರಿವ ಸೋನೆಮಳೆಯಲ್ಲಿ ನಾನು  ನೀನು  ಜೋರಾಗಿ  bike ನಲ್ಲಿ  ಲಾಂಗ್  ಡ್ರೈವ್  ಹೋಗಬೇಕು … ಮಾತನಾಡಿದರೆ  ಕೇಳಿಸಲಾಗದಷ್ಟು ಮುಖಕ್ಕೆ  ಮುತ್ತಿಡುವ  ತಂಪಾದ  ಗಾಳಿಯಲ್ಲಿ  ನಾನು  ನಿನ್ನ  ಕಿವಿಯಲ್ಲೊಮ್ಮೆ  “ನೀನಂದ್ರೆ ನನಗೆ ಇಷ್ಟ ಕಣೋ “ಎನ್ನಬೇಕು … ನೀನು  ತಿರುಗಿ  ನಾನೂ  ಕಣೆ  ಎನ್ನಬೇಕು … ಯಾರಿಲ್ಲದ  ಹಾದಿಯಲಿ  ರಾತ್ರಿ  ನಾನು  ನಿನ್ನ  ಕೈ  ಹಿಡಿದು  ನಡೆಯಬೇಕು …ನಾನು  ನಿನ್ನ  ಗೆಳತಿಯಾಗಿ  ನನ್ನ  ಭಾವನೆಯನ್ನು  ಹಂಚಿ  ಕೊಳ್ಳಬೇಕು...ಅಮ್ಮನ  ನೆನಪಾದಾಗ  ನಿನ್ನ  ಮಡಿಲು  ನನ್ನದಾಗ  ಬೇಕು… ಪುಟ್ಟದಾದ  ಮನೆಯ  ನನ್ನ  ಆರೈಕೆಯಲ್ಲಿ  ಬೆಳೆದ  ಹೂದೋಟದಲ್ಲಿ  ನಾನು  ನೀನು  ಬೆಳದಿಂಗಲಿನೂಟ ಮಾಡಬೇಕು … ನನ್ನ  ಅಪ್ಪ  ಅಮ್ಮನ  ನಿನ್ನ  ತಂದೆ  ತಾಯಿಯರಂತೆ  ಗೌರವಿಸಬೇಕು ...ಮುಂದೆ ಯಾವತ್ತೋ ನನ್ನ ಆಯ್ಕೆ ಇನ್ನೂ ಚೆನ್ನಾಗಿರ ಬಹುದಿತ್ತು ಎಂದು ನನಗನ್ನಿಸಬಾರದು.ಇಷ್ಟೇ  ಚಿಕ್ಕ  ಪುಟ್ಟ  ಆಸೆಗಳು  ನನ್ನದೂ...
ನಿನ್ನೆಲ್ಲ  ಆಸೆಗಳಿಗೆ  ಸದಾ  ಪ್ರೋತ್ಸಾಹದ  ಚಿಲುಮೆ ಯಾಗಿ  ನಾನಿರುತ್ತೇನೆ...ನೋವು ನಲಿವಿನ ಹಾದಿಯಲಿ ನಿನ್ನ ಹೆಜ್ಜೆಯೊಂದಿಗೆ ನನ್ನ ಗೆಜ್ಜೆ ದನಿಯನ್ನು ಬೆಸೆಯುತ್ತೇನೆ..ನಿನ್ನ ಆಗಮನ ನನ್ನ ಬದುಕನ್ನು ಎಷ್ಟು ಸುಂದರ ಮಾಡಿದೆ ಎಂದರೆ ನಾನು ದಿನ ನಿತ್ಯ ಮಾಡುವ ಚಿಕ್ಕ ಪುಟ್ಟ ಕೆಲಸ ಗಳು ತುಂಬಾ ಸುಂದರ ಅನಿಸುತ್ತಿವೆ ಗೊತ್ತಿಲ್ಲದೇ ಮನ ಪ್ರತಿಯೊಂದರಲ್ಲೂ ನಿನ್ನ ಜೊತೆಯನ್ನುಕಲ್ಪಿಸಿ ಕೊಳ್ಳುವಾಗ..  
 ಎಲ್ಲಾ  ಆಸೆಯನ್ನೂ ಪೂರೈಸುವೆ  ಎಂದು  ನನ್ನ  ಕಣ್ಣಲ್ಲಿ ಕಣ್ಣಿಟ್ಟು  ಒಮ್ಮೆ  ಹೇಳಿಬಿಡು
  ಬಾರಿ ನೀನು ಇಲ್ಲಿಗೆ ಬಂದಾಗ  ಅದೇನೋ  ಹೇಳಿದೆ ಯಂತಯಲ್ಲ ಅವಳು    ಬಾರಿ  ಬರದಿದ್ದರೆ  ಹಾರಿಸಿಕೊಂಡು ಹೋಗುತ್ತೇನೆಂದು  ನೀನು  ಹಾರಿಸಿ ಕೊಂಡು  ಹೋಗುವ  ಮೊದಲೇ  ನಾನು  ನಿನಗೇ  ಶರಣಾಗುತ್ತೇನೆನಿನ್ನ  ಮೆಚ್ಚಿನ  ಮಡದಿಯಾಗಿ ,ಅತ್ತೆ  ಮಾವಂದಿರಿಗೆ ಮಗಳಾಗಿ ನಿನ್ನ ಗೂಡಿಗೆ  ನಾನೂ  ಹಾರಿ  ಬಂದುಬಿಡುತ್ತೇನೆ.ನಿನ್ನ ಹಾದಿ ಕಾಯುತ್ತಿರುತ್ತೇನೆ.ನಿನ್ನ ಕಾತುರತೆಯ ಕಂಗಳಲೋಮ್ಮೆ ನನ್ನ ಪ್ರೀತಿ ಕಾಣುವ ಆತುರತೆ ನನ್ನದು..ತುಂಬಾ ಕಾಯಿಸಬೇಡ......

ಅಮ್ಮನಿಗಾಗಿ...

"ತಾಯೇ ನಿನ್ನ ಮಡಿಲಲಿ..ಕಣ್ಣು ತೆರೆದ ಕ್ಷಣದಲಿ" 
ಎಷ್ಟು ಸುಂದರ ಈ ಸಾಲುಗಳು.. ಅಮ್ಮ ,ತಾಯಿ ಅಕ್ಷರಗಳೆರಡೇ  ಆದರೂ ವಿಶಾಲವಾದ ಅರ್ಥ ಈ ಪದಗಳಲಿ..ಜಗತ್ತಿನ ಪ್ರತಿಯೊಬ್ಬ ಜೀವಿಯ ಹುಟ್ಟಿನ ಹಿಂದಿರುವ, ತ್ಯಾಗ,ಕರುಣೆ ಮಮತೆಗಳ ಸಾಕಾರ ಮೂರ್ತಿ ಈ ಅಮ್ಮ. ಜಗತ್ತಿನ  ಪ್ರತಿಯೊಬ್ಬ  ಜೀವಿಯ  ಹಿಂದಿರುವ  ತ್ಯಾಗಮೂರ್ತಿ  ಈ  ತಾಯಿ . 
ಎಷ್ಟು  ವರ್ಣಿಸಿದರು  ಬಣ್ಣಿಸಿದರು  ನಿಲುಕದೆತ್ತರಕ್ಕೆ  ಏರಿ  ಬಿಡುತ್ತಾಳೆ  ಈ  ಮಾತೆ..
ಕೇವಲ  ಮಾಂಸದ  ಮುದ್ದೆಯಾದ  ಬ್ರೂಣಕ್ಕೆ  ಒಂದು  ಆಕಾರ ಬರುವವರೆಗೂ  ತನ್ನ  ಉದರದಲ್ಲಿ  ಪೋಷಿಸಿ,ತನ್ನ  ಆಹಾರದಲ್ಲೇ  ಪಾಲುನೀಡಿ ಒಂಬತ್ತು  ತಿಂಗಳು  ಹೊತ್ತು  ಕೊನೆಗೆ  ಯಮಯಾತನೆ ಯನ್ನು  ಅನುಭವಿಸಿ  
ಜಗತ್ತಿಗೆ  ನಮ್ಮನ್ನು  ತರುತ್ತಾಳಲ್ಲ ಹೇಗೆ  ತೀರಿಸಲಮ್ಮ  ನಿನ್ನ  ಋಣವ..???ತನ್ನ  ನಿದ್ದೆಯನ್ನು  ಬಿಟ್ಟು  ರಾತ್ರಿ  ಅಳುವ  ಕಂದನನ್ನು 
ಸಮಾಧಾನಿಸಿ  ಲಾಲಿ ಹಾಡುತ್ತಳಲ್ಲಆ  ತಾಯಿಯ  ಬಣ್ಣಿಸಲು  ಸಾದ್ಯವೇ …
ಮಕ್ಕಳ  ಸುಖದಲ್ಲಿ  ತನ್ನ  ನಗುವನ್ನು  ಕಾಣುತ್ತಾಳಲ್ಲ ಜಗತ್ತಿನಲ್ಲಿ  ಯಾವದಕ್ಕೂ  ಸಮನಾಗದ ವ್ಯಕ್ತಿ  ಈ  ಮಾತೆ.…
“ಅಮ್ಮನಿಗಾಗಿ ಕರ್ಣ ಸೋತ,
ಅಪ್ಪನಿಗಾಗಿ ರಾಮ ಸೋತ,
ಹಾಲಿಗೆ ನಾನು ಸೋತೆ..
ಕಂದಾ ಎಂದಾ ನಾಲಿಗೆ ನಾನು ಸೋತೆ...."
ಎಷ್ಟು ಕವಿಗಳು ಗೀಚಿದರು ಹಾಡಿ ಹೊಗಳಿದರು ಈ ಪದದ ಅರ್ಥವನ್ನು ಹೇಳಲು ಸಾಧ್ಯವಿಲ್ಲ.ಒಮ್ಮೆ ಹೆಂಡತಿಯ ಆಸೆಗಾಗಿ ಮಗ ತನ್ನ ತಾಯಿಯನ್ನು ಕೊಂದು ಅವಳ ಹ್ರದಯ ವನ್ನು ಹಿಡಿದು ಓಡ ತೊಡಗಿದನಂತೆ.
ಆಗ ತಾಯಿಯ ಹ್ರದಯ “ಕಂದ ಬಿಡದಿಯ ಜೋಪಾನ "ಎಂದಿತಂತೆ. ಅಂತಹ ನಿಸ್ವಾರ್ಥ ಪ್ರೇಮ ಆ ತಾಯಿ ಮನಸಿನದು. ಅದಕ್ಕೆ ಇರಬೇಕು ಶಂಕರಾಚಾರ್ಯರು ಹೇಳುತ್ತಾರೆ “ಕ್ವಚಿದಪಿ ಕುಮಾತ ನ ಭವತಿ  ಅಂದರೆ ಈ ಪ್ರಪಂಹದಲ್ಲಿ ಯಾರು ಬೇಕಾದರೂ ಕೆಟ್ಟವರಾಗ ಬಹುದಂತೆ..ಆದರೆ ಆ ತಾಯಿ ಮಾತ್ರ ಕೆಟ್ಟ ವಳಾಗಲಾರಳು..
ಮಾತೆ  ತನ್ನಕಂದನಿಗಾಗಿ  ಏನೆಲ್ಲಾ  ಮಾಡಲು  ತಯಾರಾಗುತ್ತಾಳೆ..
ತನ್ನಸುಖವನ್ನೆಲ್ಲ  ಬದಿಗೊತ್ತಿ  ತನ್ನಕಂದನಿಗೆ  ಸುಪ್ಪತ್ತಿಗೆಯ  ಬಾಳನ್ನು  ಕಟ್ಟಿಕೊಡಲು  ಅಣಿಯಾಗುತ್ತಾಳೆ.. ಆಕೆ  ಏನನ್ನು  ಬೇಕಾದರೂ  ಸಹಿಸಿಯಾಳು..ಆದರೆ  ತನ್ನ  ಕಂದನ  ಕಣ್ಣಲ್ಲಿ  ನೀರು  ಬಂದರೆ  ತಾನೂ  ಕಣ್ಣಿರಿಡುತ್ತಾಳೆ.ಆ ಮಾತ್ರಪ್ರೇಮ ಆಕೆಯ ಕೊನೆ ಉಸಿರುರುವರೆಗೂ ಜಾಗ್ರತವಾಗಿರುತ್ತದೆ.

ಆದರೆ ನಮ್ಮಲ್ಲಿ ಇರುವ ಎಷ್ಟುಮೂಢಮಕ್ಕಳು ತಮ್ಮ ಕಾಲ ಮೇಲೆನಿಲ್ಲುತ್ತಿದ್ದಂತೆ ಎಲ್ಲವನ್ನು ಮರೆತು ತಾಯಿ ತಂದೆಯರನ್ನು ಮೂಲೆ ಗುಂಪ ಗಿಸಿ ಕೈ ತೊಳೆದು ಕೊಳ್ಳುತ್ತಿದ್ದಾರೆ . ಮೊನ್ನೆ ಬೀದಿಯಲ್ಲಿ ನಡೆಯುತ್ತಿದ್ದಾಗ ಒಬ್ಬ ಅಜ್ಜಿ ರೋಡ್ ಕ್ರಾಸ್ ಮಾಡಲು ಹೆದರುತ್ತಿದ್ದನ್ನು ಕಂಡು ಅಯ್ಯೋ ಎನಿಸಿ help ಮಾಡೋಣವೆಂದು ಹೋದೆ. ಯಾಕೆ ಯದೋ ಎಳಿವಯಸ್ಸು.ಅಜ್ಜಿನೀವ್ಯಾಕೆಬರಲು ಹೋದಿರಿ ಆರಾಮಾಗಿ ಕುಳಿತು ಕೊಂಡುಇರುವುದನ್ನು ಬಿಟ್ಟು ಎಂದಾಗ ಆ ಅಜ್ಜಿ ನಗುತ್ತ ಉತ್ತರಿಸಿದರು . ತಂಗಿ  tablet ಬೇಕಾಗಿತ್ತು .. ಮನೆಯಲ್ಲಿ ಮಗನಿಗೆ ಒಂಚೂರು ಬಿಡುವಿರಲಿಲ್ಲ  ಭಾನುವಾರವೆಂದು ಸೆನೆಮ ನೋಡಲು ಹೋಗಿದ್ದಾರೆ ಅದಕ್ಕೆ ನಾನೆ ಬಂದೆ ಎಂದು..ಅಂತ ಸ್ಥಿತಿಯಲ್ಲೂ  ಆಕೆ ತನ್ನ ಮಗನನ್ನು ಬಿಟ್ಟುಕೊಡಲು ತಯಾರಿರಲಿಲ್ಲ . ಆ ಮಾತ್ರ ಪ್ರೇಮಕ್ಕೆ ಹೇಳಲು ನನ್ನಲ್ಲಿ ಪದಗಳಿರಲಿಲ್ಲ.ಅಂತ ಮಕ್ಕಳಿಗೆ ದಿಕ್ಕಾರ ವಿರಲಿ..

“ಕಡಿಯಲೋಲ್ಲೆ ನೀ ಕರುಳ ಬಳ್ಳಿ
ಒಲವೂಡುತಿರುವ ತಾಯೇ ಬಿಡದಿ ಭೂವಿಯ ಮಾಯೆ "
ಒಮ್ಮೆ ಯೋಚಿಸಿ ನೋಡಿ . ಒಂದು ವೇಳೆ ಆ ತಾಯಿ ಎನ್ನುವವಳು ತನ್ನ ಸುಖದ ಬಗ್ಗೆ ಯೋಚಿಸಿದ್ದರೆ ನಾವಿಂದು ಈ ಭೂಮಿಯ ಮೇಲೆ ಬರುತ್ತಿರಲಿಲ್ಲ.ಉದರ ದಲ್ಲಿದ್ದಾಗಲೇತೊಂದರೆ ಎಂದು ಹೊಸಕಿ ಹಾಕಿದ್ದರೆ ನಾವಿಂದು ಕಾಣುತ್ತಿರಲಿಲ್ಲ ಈಮಾಯಲೋಕವ ?? ಎಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವೇ ಇರಲಿಲ್ಲ ???? ಹೇಗೆ ಬಣ್ಣಿಸುತ್ತಾ ಹೋದರೆ ಪದಗಳಿಗೆ ಸಿಲುಕಾದಷ್ಟು,ಕಲ್ಪನೆಯನ್ನು ಮೀರುವಷ್ಟು ಆ ತಾಯಿ ಎಂಬ ಪದ ವಿಸ್ತಾರ ವಾಗುತ್ತದೆ  ಅಮ್ಮ ಹೇಗೆ ಬಣ್ಣಿಸಲಮ್ಮ ನಿನ್ನ ...?? ಆ ಮಮತಾ ಮೂರ್ತಿಗೆ ನನ್ನ ಕೋಟಿ ನಮನ....


ಮಾ…. ತುಜ್ಹೆ ಸಲಾಂ.........

ಉಳಿದುಹೋದ ಮಾತುಗಳು.....

“ಮಾಮರವೆಲ್ಲೋ ಕೊಗಿಲೆಯಲ್ಲೋ ಎನೀ  ಸ್ನೇಹ  ಸಂಬಂಧ ಎಲ್ಲಿಯದೋ  ಈ ಅನುಬಂಧ ”
ಎಂದು  ಪ್ರಖ್ಯಾತ  ಕವಿಯೊಬ್ಬರು  ಬರೆದಿರುವ  ಹಾಡು  ರೇಡಿಯೋ  ದಲ್ಲಿ  ಮೂಡಿ  ಬರುತ್ತಿರಲು  ಅಲ್ಲೇ  ಕುಳಿತು  ಓದುತ್ತಿದ್ದ  ನನ್ನ ಮನವು  ಹಿಂದಿನದನ್ನು  ಮೆಲುಕು  ಹಾಕತೊಡಗಿತು.. ಬದುಕು  ಸುಂದರ  ಅನಿಸುವಾಗ  ಸಾಕೋ  ಸಾಕು  ಎನ್ನುವಂತೆ,
ಇನ್ನೇನು  ಏನೂ  ಇಲ್ಲ ಎನುವಾಗ  ಬೇಕಿತ್ತು  ಅನ್ನುವಂತೆ  ಜೀವನದಲ್ಲಿ  ಕೆಲವೊಂದು  ದಿನಗಳು  ಹಾಗೆ  ಇದ್ದು  ಬಿಟ್ಟಿದ್ದರೆ  ಎಷ್ಟು  ಚೆನ್ನಾಗಿತ್ತು 
 ಅಲ್ಲವೇ…..ನೀನು  ನಾನು  ಜೊತೆಯಾಗಿ  ಕಳೆದ  ಎಷ್ಟೊಂದು  ದಿನಗಳ  ಸಾವಿರಾರು  ಕ್ಷಣಗಳ  ನೆನಪು  ಮೂಡಿದಾಗ  ನನಗೆ  ನಾನೇ 
 ಅಂದುಕೊಂಡಿದ್ದಿದೆ.. ಜಗತ್ತು  ಬದಲಾಗ  ಬಾರದಿತ್ತು...!!! ಕೆಲವೊಮ್ಮೆ  ಅಂದುಕೊಳ್ಳುತ್ತೇನೆ  ನಿನಗೆ  ನನ್ನ  ನೆನಪೇ
 ಬರುವುದಿಲ್ಲವೇನೋ?? ಹಾಗೆಂದುಕೊಂಡಾಗ  ನನಗೆ  ನನ್ನ  ಮೇಲೆ  ಬೇಸರವಾಗಿದ್ದಿದೆ…ಮತ್ತೊಮ್ಮೆ  ಅಂದುಕೊಳ್ಳುತ್ತೇನೆ ,
ಈ  ಹಾಳಾದ  ನೆನಪು ನನ್ನಬದಲಾದರೂ  ಬಿಡುತ್ತಿಲ್ಲವಲ್ಲ…ಮರೆಯಬೇಕೆಂದು ಅಂದು  ಕೊಂಡಂತೆ  ಮತ್ತೆ  ಮತ್ತೆ  ಮರುಕಳಿಸುವ  ಸುಂದರ  ನೆನಪುಗಳು.. ಒಮ್ಮೆಲೇ  ಮನದಲ್ಲಿ  ಕಾಮನಬಿಲ್ಲು,ಮತ್ತೆ  ಚಿಂತನ  ಮಂಥನ  ನನ್ನಲ್ಲೇ.…!!!

"ಇಗೇಕೆ ಆ ನೆನಪು ಬಂದೆನ್ನ ಕಾಡಿದೆ
ಎದೆಯ ಆಳದಲ್ಲಿ ವಿಷಾದ ಮೂಡಿದೆ "

ಏನೋ ಸೆಳೆತ ಇದೆ ಕಣೆ ಗೆಳತಿ ನಿನ್ನ ಸ್ನೇಹದಲ್ಲಿ...ನಿನ್ನನೆನಪುಗಳೆಲ್ಲ ಆಯಸ್ಕಾಂತದಂತೆ ನನ್ನ ಸೆಳೆಯುತ್ತವೆ..ಕೇವಲ ನಗುವಿನಲ್ಲಿ ಪರಿಚಯವಾದ ನಾನು ನೀನು ಎಷ್ಟೊಂದು ಆತ್ಮೀಯರಾಗುತ್ತೆವೆಂದು ಬಹುಷ: ನಾವಿಬ್ಬರೂ ಅಂದುಕೊಂಡಿರಲಿಲ್ಲ…
ಆದರೂ ಮರೆಯಲಾಗದ ಒಂದು ಬಂಧ ನಮ್ಮನ್ನು ಬಂದಿಸಿ ಬಿಟ್ಟಿದ್ದು ವಿಪರ್ಯಾಸವೇ.….??ನಿನಗೂ ಹಾಗೆ ಅನಿಸಿದ್ದರೆ ನೀನುನನ್ನಿಂದ ಮಾನಸಿಕವಾಗಿ ಬಹುದೂರ ನಡೆದು ಬಿಡುತ್ತಿರಲಿಲ್ಲ ಅಲ್ಲವೇ.…
                           "ಬಣ್ಣ ಬಣ್ಣದ ಚಿತ್ರ ಬರೆದು
ಹೋದಳೆನ್ನ ತೊರೆದು
ಚಿತ್ರಕ್ಕೆ ಮಸಿ ಬಳಿದು "
ನಿನಗೆ ನೆನಪಿದೆಯೇ...ಎಷ್ಟೊಂದು ಕ್ಷಣಗಳು ನಾವಿಬ್ಬರೂ ಜೊತೆಯಾಗಿ ನಡೆದಿಲ್ಲ.…ಸುಂದರ ಇರುಳಿನಲ್ಲಿಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿಲ್ಲ...ಎಷ್ಟೊಂದು ವಿಷಯ ಚರ್ಚಿಸಿಲ್ಲ.ನಾನು ಪಟಪಟನೆ ಮಾತನಾಡುತ್ತಿದ್ದರೆ ಸುಮ್ಮನೆ ಹಸನ್ಮುಖಿಯಾಗಿ ಆಲಿಸುತ್ತಿದ್ದ ನಿನ್ನ ಮುಖ, ನಿನ್ನ ಕಣ್ಣುಗಳು ಈಗಲೂ ನೆನಪಿದೆ... ಇವತ್ತಿಗೂ ನಾನೂ ಮಾತನಾಡುತ್ತೇನೆ... ಆದರೆ ಆಲಿಸಲು ನೀನಿಲ್ಲ ಪಕ್ಕದಲ್ಲಿ ಇಷ್ಟೇ ಬದಲಾಗಿದೆ ಜೀವನ..


ನಾನು ಇದ್ದಲ್ಲಿ ನೀನು ನೀನು ಇದ್ದಲ್ಲಿ ನಾನೂ ಎಲ್ಲವೂ ಜೊತೆಯಾಗಿ ಮಾಡುತ್ತಿದ್ದ ನಾವು ಇಂದು ನನಗೆ ನೀನು ನಿನಗೆ ನಾನು..ನೆನಪಾದರೆ ನಿನಗೆ ನಾನು ಸಿಗಲೇ ಬಾರದಿತ್ತು ಇಂದು ಕೂಡ ಅನಿಸಿದ್ದಿದ್ದೆ ನನಗೆ.…ಎಷ್ಟೊಂದು ಕಾಡಿಸಿದ್ದಿದೆ ನಾನು ನಿನಗೆ.…ನೆನೆದಂತೆ ಮನದಲ್ಲಿ ಅರಿವಿಲ್ಲದಂತೆ ಒಂದೊಂದೇ ಪುಟಗಳು ತೆರೆಯುತ್ತ ಹೋಗುತ್ತವೆ.…ನಿನ್ನ ಮಾತು ಮೀರಿದರೆ ನೀನು ಗದರಿಸುತ್ತಿದ್ದ ರೀತಿ “ಅಬ್ಬಾರೆ !!!!”ಎಂದು ಕಣ್ಣು ಬಿಡುತ್ತಿದ್ದ ಮುಖ ಇಂದಿಗೂ ಕೂಡ ನನ್ನ ಮನದಲ್ಲಿ ಅಚ್ಚಾಗಿ ಉಳಿದುಬಿಟ್ಟಿದೆ.…ಯಾರ ಕಣ್ಣುಬಿತ್ತೋ ಏನೋ ಇಂದು ಎಲ್ಲಾ ಸುಳ್ಳೇನು ಅನಿಸುವಷ್ಟರ ಮಟ್ಟಿಗೆ ಬದಲಾಗಿದೆ.…

ಒಂದು ದಿನ ನೋಡದಿದ್ದರೂ ಏನೋ ಕಳೆದು ಕೊಂಡಂತೆ ಭಾಸವಾಗುತ್ತಿದ್ದ ನಮಗೆ ಇಂದು ಫಾರ್ಮಾಲಿಟಿಯ ಮಾತಷ್ಟೇ ಉಳಿದಿದ್ದರೆ
ಜಗತ್ತು ಜೀವನ ಎಂತಹವೈಪರೀತ್ಯಗಳನ್ನು ಸ್ರಷ್ಟಿಸುತ್ತೆ ಅನಿಸುತ್ತದೆ ಅಲ್ಲ..!!ಆದರೂ ಯಾಕೋ ಕಣೆ ನಿನ್ನ
ತುಂಬಾ ಜ್ಞಾಪಿಸಿಕೊಳ್ಳುತ್ತಿನಿ ..ಮರೆತರೂ ನೆನಪಿಸಿಕೊಳ್ಳಲು ಇಷ್ಟಪಡುತ್ತಿನಿ …

““ಇಷ್ಟು ಕಾಲ  ಒಟ್ಟಿಗಿದ್ದು  ಎಷ್ಟು ಬೆರೆತರು
     ಅರಿತೆವೇನು  ನಾವು  ನಮ್ಮ  ಅಂತರಾಳವ”

ಎಷ್ಟು ಕಾಲ ಒಟ್ಟಿಗಿದ್ದ ನಮಗೆ ಇನ್ನಷ್ಟು ಸಮಯ ಒಟ್ಟಿಗೆ ಇರಬಹುದಿತ್ತು..ಇರುತ್ತೆನೆಂದು ನೀನು ನನ್ನ ನಂಬಿಸಿಬಿಟ್ಟಿದ್ದೆ. .. ಆದರೆ ಕ್ರಮೇಣ ನೀನು ಮರೆತೂ ಬಿಟ್ಟೆ...ಅವಕಾಶವಿದ್ದರೂ ಬೇಡವೆಂದು ದೂರ ಸರಿಯುತ್ತಲೇಬಂದೆ...ಎಷ್ಟು ಹತ್ತಿರ ಬಂದರೂ ಬೇಡವೆಂದು ದೂರವಾಗುತ್ತಲೇ ಹೋದೆ..ಇದೆಲ್ಲ ಅರಿವಾದಾಗ ನಾನು ಕಂಪಿಸಿಬಿಟ್ಟಿದ್ದೆ..ಈಗ ಅನಿಸುತ್ತದೆ ನಮ್ಮಲ್ಲಿದ್ದಿದು ಸ್ನೇಹಾನ ಅಥವಾ ಅದೇನೋ NEEDಅನ್ನುತ್ತಾರಲ್ಲ ಅದಾ...???!!!ಇನ್ನು ಉತ್ತರ ಮಾತ್ರ ಸಿಕ್ಕಿಲ್ಲ..!!! ಕೇಳಿದರೆ ನಿನ್ನಿಂದ ಅದೇ ಮೌನ.…ಅದಕ್ಕೆ ನಾನೇ ಉತ್ತರ ಕಂಡು ಕೊಂಡಿದ್ದೇನೆ...ನಾನೆ ಹಿಂತಿರುಗಿ ಹೋಗುವ ಮನಸ್ಸು ಮಾಡಿದ್ದೇನೆ... ನೀನಿಲ್ಲದ ಬದುಕುಅಭ್ಯಾಸವಾಗಿಬಿಟ್ಟಿದೆ.ನಾನಿಲ್ಲದ ಬದುಕೇ ನಿನಗೆ ಸುಂದರವಾಗಿದ್ದರೆ ಅದು ಇನ್ನಷ್ಟು ಸುಂದರವಾಗಿರಲೆಂದು ನಾನು ಬಯಸುತ್ತೇನೆ…ಆ ದೇವರ ಹಾರೈಕೆ ಸದಾ ನಿನ್ನೊಂದಿಗಿರಲಿ.….ಅರಿವಿಲ್ಲದಂತೆ ಕಣ್ಣುಗಳಿಂದ ಹೊಂಗಿಲು ಉದುರಲು… ಅಷ್ಟರಲ್ಲಿ ಅಮ್ಮ ಕರೆದಂತಾಗಿ ನೆನಪಿನಿಂದ ಹೊರ ಬಂದಿದ್ದೆ … ಸಮಯಕ್ಕೆ ಸರಿಯಾಗಿ ನನಗಿಷ್ಟವಾದ

"ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಕೂಡಿ  ಬರದಿರು  ಮತ್ತೆ  ಹಳೆಯ  ನೆನಪೇ  “
ಎಂಬ ಹಾಡನ್ನು ರೇಡಿಯೋದ ಜೊತೆಗೆ ನಾನು ಗುನುಗುನುಗುತ್ತಿದ್ದಂತೆ ನಗುವೊಂದು ನನ್ನಲ್ಲಿ ಮೂಡಿತ್ತು… ನಾನು ಅಮ್ಮನ ಕರೆಗೆ ಓಗೊಟ್ಟು ನನ್ನ ಕೆಲಸದ ಕಡೆಗೆ ಮುಖ ಮಾಡಿದೆ …….

MISSING U....


ಜೊತೆಯಾಗಿ ನಡೆದು ತಿಳಿಯದಂತೆ ನೀ ನಡೆದೇ ಮುಂದೆ...
ಹಿಂಬಾಲಿಸೋಣವೆಂದು ಹಿಂದೆ ಬಂದೆ ಬೇಡವೆಂದು ನೀ ದೂರವಾದೆ...
ನಿನ್ನ  ದಾರಿ ಅರಿಯದೆ ನಾನು ಹಿಂತಿರುಗಿ ಹೋಗುವ ಮನಸ್ಸು ಮಾಡಿದೆ..
ಹೆಜ್ಜೆ ಮಾಸುವ ಮೊದಲೊಮ್ಮೆ ಹೇಳ ಬಯಸುತ್ತೇನೆ..

STILL AM MISSING U.....

ಆ ದಿನಗಳು ..

ಅಂದು ನನ್ನ 2nd ಇಯರ್ ರಿಸಲ್ಟ್ ಬಂದಿತ್ತು.ಪೂರ್ತಿ ವರ್ಷ ಓದಿ ಕೊನೆಯಲ್ಲಿ ವಿಪರೀತ ಜ್ವರದಿಂದ ನರಳಿ ಏನೋ ಒಂದಿಷ್ಟು ಬರೆದಿದ್ದ ನಂಗೆ ಆವತ್ತು ಬಹಳ ನೆನಪಿರುವದಿನ.ಯಾರೆಷ್ಟು ಹೇಳಿದರು ನನ್ನ ರಿಸಲ್ಟ್ ನೋಡುವ  ಧೈರ್ಯವೇ ನನ್ನಲ್ಲಿರಲಿಲ್ಲ.ಕೊನೆಗೂ ಅಪ್ಪನ ಒತ್ತಾಯಕ್ಕೆ ಮಣಿದು ನೋಡಿದೆ .ಮಾರ್ಕ್ಸ್ ತುಂಬಾ ಚೆನ್ನಾಗಿಯೇ ಬಂದಿತ್ತು.ಕನಸಿನಂತೆ ಒಂದು ಒಳ್ಳೆಯ ಇಂಜಿನಿಯರಿಂಗ್ ಕಾಲೇಜ್ ಸೇರಿಯೂ ಬಿಟ್ಟೆ .

ಮೊದಲದಿನದಿಂದ ಕೊನೆಯವರೆಗೂ ಅದು ನನ್ನಬದುಕಿನ ಬಣ್ಣದ ಪುಟಗಳು.ಅಲ್ಲಿ ಕಳೆದ ಪ್ರತಿಯೊಂದು ಕ್ಷಣವೂ ಹಸಿರು.seniorsನ ರಾಗಿಂಗ್ಗೆಹೆದರಿ ಹರಸಾಹಸ ಪಡುತ್ತಿದ್ದ ದಿನಗಳಿಂದ ಹಿಡಿದು ನಾವು juniorsಗಳಿಗೆ ರಾಗಿಂಗ್ಮಾಡಿದ ದಿನದವರೆಗೂ.ಮೊದಲ ವರ್ಷಕಳೆಯುವದರೊಳಗೆ ನಮ್ಮಲ್ಲೇ ಒಂದು ಗುಂಪು ಉಂಟಾಗಿ ಎರಡನೇ ವರ್ಷರಾಗಿಂಗ್ ಗೆತಯಾರಿ ನಡೆಸಿದ್ದ ನಮಗೆ ಅಲ್ಲಿ ಸಿಕ್ಕ ಮಜಾ ಇದನೆಲ್ಲ ಮರೆಯಲು ಸಾದ್ಯವೇ ಇಲ್ಲ.ಜೊತೆಗೆ ಓದಲ್ಲೂ ಮುಂದಿದ್ದ ನಾವುwardenಗೆಸುಳಿವೇ ಕೊಡದಂತೆ ಮಾಡುತ್ತಿದ್ದ ಚೆಷ್ಟೇಗಳಿಗಂತೂ ಲೆಕ್ಕವೇ ಇಲ್ಲ ಬಿಡಿ.

ನಾನು   ಯಾವಾಗಲು  ಅಂದು  ಕೊಳ್ಳುತ್ತೇನೆ .ಒಮ್ಮೆಯಾದರೂ  students life ನ್ನು  ಹಾಸ್ಟೆಲ್ನಲ್ಲಿ  ಕಳೆಯಬೇಕೆಂದು. ಅದರ  ಮಜನೆ  ಬೇರೆ .ಅಲ್ಲಿ  ಸಿಗುವ  ಮಜಾ mostly   ಇನ್ನೆಲ್ಲೂ ಸಿಗೊದಿಲ್ಲವೇನೋ .Sem  exam ಬಂತೆಂದರೆ  ರಾತ್ರಿ   ಹಗಲು  ಊಟ  ನಿದ್ರೆ  ಬಿಟ್ಟು  ಓದುತ್ತಿದ್ದವರು  ಒಂದೆಡೆಯಾದರೆ ,ಗಂಟೆಗಟ್ಟಲೆ  ಫೋನಿನಲ್ಲಿ  ಎಲ್ಲೆಂದರಲ್ಲಿ  (bathroomnnu) ಬಿಡದೆ  ಹರಟುತ್ತಿದ್ದ  ಹುಡುಗಿಯರು  ಒಂದೆಡೆ ,ಮತ್ತೊಂದೆಡೆ  ಪ್ರಾಜೆಕ್ಟ್  completion ನ  ಭರಾಟೆಯಾದರೆ ಇನ್ನೊಂದೆಡೆ  ಇಂಟರ್ನಲ್ಸ್ ಗಾಗಿ  ಪೇಚಾಟ .ಪ್ರತಿಯೊಂದು   ಗಳಿಗೆಯನ್ನು  ಸವಿದಮೇಲೆ   ಅನಿಸುತ್ತಿದ್ದೆ  ಮತ್ತೊಮ್ಮೆ  ಆ   ಜೀವನ  ಬರಬಾರದಿತ್ತ.!!!  ಯಾರದ್ರು  ಒಬ್ಬರು  commit ಆದರೆ  ಅದರ  ಬಗ್ಗೆ  ಒಂದಿಷ್ಟು  ವಿಮರ್ಶೆ ,ಕಾಲೇಜ್ ನಲ್ಲಿ  ಹೊಸ  ರೂಲ್ಸ್  ಬಂದರೆ  ಸಾಕು  ಒಂದಿಷ್ಟು  ಕಾಮೆಂಟ್ಸ್ ಗಳು  ,ಮನೆಯ  ನೆನಪಾದರೆ  ಸಾಂತ್ವನ  ನೀಡುತ್ತಿದ್ದ  ಸ್ನೇಹಿತೆಯರ  ಮದಿಳುಗಳು ,ಮೂವಿ ಗಾಗಿ  bunk  ಮಾಡಿ ಆಮೇಲೆ  ಒಳ್ಳೆ  ಹುಡುಗರಂತೆ  phose  ಕೊಡುತ್ತಿದ್ದ  ದಿನಗಳನ್ನು  ನೆನೆದಾಗ  ಕಣ್ಣಂಚಲ್ಲಿ ನೀರು  ಅರಿವಿಲ್ಲದಂತೆ  ಮೂಡುತ್ತದೆ .  ಕನಸು  ಕಾಣುತ್ತ  ಯಾವುದರ  ಪರಿವಿಲ್ಲದಂತೆ  ಬೆಳೆದಿದ್ದೆ  ಗೊತ್ತಾಗಲಿಲ್ಲ .
 ಇನ್ನು  ಕಾಲೇಜ್ಗೆ  ಬಂದರೆ ನೆನಪಾಗುವ  coffieshop,ಪುಟ್ಟದಾದ  ಬೇಕರಿಚಾಟ್ಸ್ ಗಳಿಗೆ  ಫೇಮಸ್  ಆಗಿದ್ದ  ಕಾಲೇಜನ  fastfood ,ಹೆಸರಿಗೆ  readingರೂಂ  ಆಗಿದ್ದರೂ ಹರಟೆ  ಕಟ್ಟೆಯಾಗಿದ್ದ ,ಪ್ರೇಮಿಗಳಿಗೆ  ಮೆಚ್ಚಿನ  ತಾಣವಾಗಿದ್ದ  reading ರೂಂ  ಇವೆಲ್ಲ  ಮನಸಿನ  ಪುಟದಲ್ಲಿ  ಸುಳಿಯುತ್ತಿದ್ದಂತೆ ಅನಿಸಿದ್ದಿದೆ .”ಕನಸು  ನನಸಾದ  ದಿನಗಳಿಗಿಂತ  ಕನಸು ಕಾಣುತ್ತಿದ್ದ  ದಿನಗಳೇ  ಚೆನ್ನಾಗಿದ್ದವು ”

ಮೊದಲ  ಬಾರಿ  ಹುಡುಗನೊಬ್ಬನಿಂದ  ಕೆಂಪು  ಗುಲಾಬಿ  ಪಡೆದಾಗ  ಉಂಟಾಗಿದ್ದ  ಪುಳಕ ,ಮೊದಲಬಾರಿ  ಕಾಲೇಜ್ bunk ಮಾಡಿ   ಮೂವಿ  ನೋಡಿದ  ದಿನ ,ಮೊದಲಬಾರಿ  ಇಂಟರ್ನಲ್ಸ್  ನಲ್ಲಿ  fail   ಆಗಿ   ಅತ್ತು  ಕರೆದ ಗಳಿಗೆ ,ಮೊದಲಬಾರಿಗೆ  ಕಂಪನಿ ಅಲ್ಲಿ  place ಆಗಿಎಲ್ಲರಿಂದ  ಮೆಚ್ಚುಗೆ  ಪಡೆದು  ರೋಮಾಂಚನ  ಅನುಬವಿಸಿದ  ಕ್ಷಣ  ಇವೆಲ್ಲ ಮರೆಯಬೇಕೆಂದು  ಅಂದು  ಕೊಂದರು  ಮರೆಯಲಾಗದ  ಕ್ಷಣಗಳು .
ಎಂದು  ಅಂದುಕಂಡಿದ್ದ  ಕನಸುಗಳೆಲ್ಲ  ನನಸಾಗಿದೆ .ಹೆಸರಾಂತ  ಕಂಪನಿಯಲ್ಲಿ  ಉದ್ಯೋಗಿಆಗಿ ಐದಂಕಿಯ  ಸಂಬಳ  ಬ್ಯಾಂಕ್  ಅಕೌಂಟ್  ಸೇರಿದೆ .ಇಷ್ಟಪಟ್ಟಿ ದ್ದನ್ನೆಲ್ಲ  ಕೊಂಡುಕೊಳ್ಳುವ  ಕಾಲ ಬಂದಾಗಿದೆ .ಆದರೆ  ಏನೋ  ರುಚಿಯಿಲ್ಲ  ಈ  ಜೀವನದಲ್ಲಿ .ಜೊತೆಯಾಗಿದ್ದ  ಜೀವಗಳೆಲ್ಲ  ಒಂದೊಂದು  ಕಡೆ .ಫೋನ್  ಮೆಸೇಜ್ ಗಳಲ್ಲೇ  ಮಾತುಕತೆ .ಬಯಸಿದರು  ಯಾವ  ಸ್ನೇಹಿತರ  ತೋಳು  ಸಿಗಲಾರದು  ಬೇಕೆಂದಾಗ .ಒಂದೇ  ಕಡೆ   ಇದ್ದು ಮೀಟ್  ಆಗಲಾಗದ ಪರಿಸ್ಥಿತಿ , ಗಾಂದಿಕ್ಲಾಸ್ಸ್  ನಲ್ಲಿ  ಕುಳಿತು  ಸಿನಿಮಾ  ನೋಡುತ್ತಿದ್ದ  ವರಿಗೆ  ಇಂದು ಮಲ್ಟಿಪ್ಲೆಕ್ಸ್  ನಲ್ಲಿ  ಕುಳಿತು  ಸಿನಿಮಾ  ನೋಡಿದರು  ಆ  ದಿನಗಳ  ರುಚಿಯಿಲ್ಲ .ಯಾಕೆ  ಹೀಗೆ?  ಬದುಕೆಂದರೆ  ಹೀಗೆ ಇರಬೇಕು .ಆದಿನಗಳು  ನಮ್ಮ  ಪಾಲಿಗೆ  ಮುಗಿದಿವೆ . ಹೊಸದನ್ನು  ಸ್ವಾಗತಿಸುವುದು  ಅನಿವಾರ್ಯ .ಯಾಂತ್ರಿಕ ಬದುಕಿಗೆ  ಅಡಿಯಿಟ್ಟೂ ಆಗಿದೆ  .ಜವಾಬ್ದಾರಿಗಳು  ಹೆಗಲೆರಿವೆ .ನಮ್ಮದೇ  ಅದ   ಕಟ್ಟುಪಾಡುಗಳಿಗೆ  ಬೆಲೆ   ಕೊಡಲೇ ಬೇಕಾಗಿದೆ .ಮುಂದೊಂದು  ದಿನ ಬದುಕಿನ  ಪುಸ್ತಕದ  ಪುಟ ತೆರೆದಾಗ  ಚಿತ್ತಾರ ಗಳಿಂದಲೇ  ಕೂಡಿದ  ಅಧ್ಯಾಯ  ನಮ್ಮ ಪಾಲಿಗಿದೆಯಲ್ಲಾ ಎಂಬುದೇ  ಸಮಾಧಾನ . ಹಿಂದಿನದನ್ನು  ನೆನೆಯುತ್ತ  ಹೋದರೆ  ಸಮಯದ ಪರಿವೆ  ಬರುವುದಿಲ್ಲ . ಮತ್ತೆ  ಕೆಲಸದ  ಕರೆ  ಬರುತ್ತಿದೆ .ವಾಸ್ತವ  ಕರೆಯುತ್ತಿದೆ   ಹೋಗಿಬರಲೇ..….!!!?