ಬನ್ನಿ ಭಾವಗಳೆ ಬನ್ನಿ ನನ್ನೆಡೆಗೆ..
ನೆನಪಾದವು ಸುಂದರ ಭಾವಗೀತೆಯ ಸಾಲುಗಳು.ಜೀವನ ಮತ್ತು ಭಾವನೆ ಈ ಎರಡು ಒಂದೆ ನಾಣ್ಯದ ಮುಖಗಳು.ಭಾವವಿಲ್ಲದ ಜೀವವಿಲ್ಲ.ಜೀವವೇ ಇಲ್ಲದ ಭಾವಕ್ಕೆ ಬೆಲೆಯೂ ಇಲ್ಲ.ಜೀವ ಹಾಗೂ ಭಾವ ಒಂದಾದರೆ ಜೀವನ.ನಮ್ಮ ಸುತ್ತ ಮುತ್ತಲಿನ ಪ್ರತಿಯೊಂದು ಜೀವ ಸಂಪನ್ಮೂಲದ ಜೊತೆಗೆ ಹಾಸು ಹೊಕ್ಕಾಗಿದೆ ನವಿರಾದ ಭಾವಗಳು.ತೋರ್ಪಡಿಸುವ ರೀತಿ ತರಹದ್ದಾಗಿರುತ್ತದೆ.ಯಾರದೋ ಮಗುವಿನ ಮುಗ್ಧ ಮುಖವನ್ನು ಕಂಡಾಗ ಅರಿವಿಲ್ಲದೆ ಮನಸೊಮ್ಮೆ ಅರಳಿ ನಕ್ಕಿರುತ್ತದೆ.ಬಸ್ಸಿನಲ್ಲಿ ಯಾವತ್ತೋ ಯಾರದೋ ಪಕ್ಕ ಹೋಗಿ ಕೂತಾಗ ಅತ್ಮೀಯತೆಯ ನಗುವೊಂದು ಸುಳಿದಾಡಿರುತ್ತದೆ.ಅಪರಿಚಿತರ ಗುಂಪಿನಲ್ಲೂ ಎಲ್ಲೊ ಒಂದು ಜೀವ ಪರಿಚಿತರಂತೆ ನಿಮ್ಮ ಮಾತನಾಡಿಸಿ ಬಿಟ್ಟಿರುತ್ತದೆ.ಎಲ್ಲೋ ಹುಟ್ಟಿ,ಎಲ್ಲೋ ಬೆಳೆದು,ಎಲ್ಲೋ ಸೇರಿ ಒಂದಾದ ಎರಡು ಮನಗಳ ನಡುವೆ ಸ್ನೆಹವೆಂಬ ಸೇತುವೆ ನಿರ್ಮಾಣವಾಗಿ ಬಿಡುತ್ತದೆ.ಎನೂ ಅಲ್ಲದ ವ್ಯಕ್ತಿಯೊಬ್ಬ ಜಗತ್ತನ್ನು ತೊರೆದಾಗ ಮನಸ್ಸು ತೇವವಾಗಿ ಬಿಡುತ್ತದೆ.ಹಲವರಲ್ಲಿ ಒಬ್ಬರಿಗೆ ಮಾತ್ರ ನಿಮ್ಮ ನಾಳೆಗಳು ಮೀಸಲಾಗಿ ಬಿಡುತ್ತವೆ.ದೂರದಲ್ಲಿದ್ದರೂ ಅತ್ಮೀಯರ ಒಂದು ಕಾಲ್ ನಿಮ್ಮನ್ನು ಅವರ ಹತ್ತಿರಕ್ಕೆ ಕೊಂಡೊಯ್ದು ಬಿಡುತ್ತದೆ.ಇವೆಲ್ಲ ಮನುಷ್ಯ ಭಾವಗಳಿಗೆ ಬಂಧಿಯಾಗುವ ಕೆಲವೊಂದು ಪರಿಗಳಷ್ಟೇ.
ಮನುಷ್ಯನ ಭಾವಗಳು ಬರಿ ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ.ಅವೂ ಜೀವವಿಲ್ಲದ ವಸ್ತುಗಳಿಗೂ ಕೂಡ ಹರಿದು ಬಿಡುತ್ತವೆ. ಜೋಪಾನ ಮಾಡಿದ ಹಳೆಯ ಪುಸ್ತಕಗಳು,ನೆನಪುಗಳ ಹೊತ್ತು ಮತ್ತೆ ನೆನಪಾಗುವ ಆಟೋಗ್ರಾಫ್ ಗಳು,ಹುಟ್ಟಿ ಬೆಳೆದ ಅನುಭವ ಕಟ್ಟಿಕೊಟ್ಟ ನಮ್ಮೂರು,ಆಡಿ ಬೆಳೆದ ಶಾಲೆ,ತಿರುಗಿ ಸೋತ ಬೆಟ್ಟ ಗುಡ್ಡ,ಓಡಿ ಬೀಳುತ್ತಿದ್ದ ಹಾದಿ,ಕಲಿತು ನಲಿದ ಕಾಲೇಜು,ಅದರೊಂದಿಗೆ ಹಸಿರಾಗಿರುವ ನೆನಪುಗಳು,ನಮ್ಮದೆನ್ನುವ ಆಫಿಸ್,ಡೆಸ್ಕ್, ಇಷ್ಟ ಪಟ್ಟು ತೆಗೆದುಕೊಂಡ ಮೊಬೈಲ್, ನಮ್ಮ ಭಾಗವೇ ಆಗಿ ಬಿಡುವ ಲ್ಯಾಪ್ ಟಾಪ್, ಉಸಿರಂತೆ ಕಾಪಾಡುವ ಗಿಡಗಳು,ಮತ್ತೆ ಮತ್ತೆ ನೆನಪಾಗಿ ಕಾಡುವ ಕೆಲವೊಂದು ಹಾಡುಗಳು,ಸಾಲುಗಳು ಹೀಗೆ ಎಷ್ಟೋ ಹೆಸರಿಗೆ ಜೀವವಿಲ್ಲದ ವಸ್ತುಗಳಲ್ಲೂ ಭಾವಗಳನ್ನು ಕಂಡು ಬಿಡುತ್ತೇವೆ. ಅದು ಮನುಷ ಸಹಜ ಗುಣ.ಮನುಷ್ಯ ಎಷ್ಟೇ ಭಾವನಾತ್ಮಕ ನಲ್ಲ ಎಂದರೂ ಗೊತ್ತಿಲ್ಲದೇ ಅವನಲ್ಲಿ ಭಾವಗಳ ಚಿಲುಮೆ ಜೀವಂತ.ಇದು ಕೇವಲ ಮನುಷ್ಯನಿಗಷ್ಟೇ ಹೊರತಾಗಿಲ್ಲ.ಪ್ರಾಣಿ-ಪಕ್ಷಿಗಳು ಅವರ ಭಾವನೆಗಳನ್ನು ಅವರವರದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತವೆ.ತಮ್ಮವರು ಬಂದಾಗ ಪ್ರಾಣಿಗಳು ಮೈ ಸೊಕಿಸುವುದರಲ್ಲೋ,ಕಾಲ ಬಳಿ ಬಂದು ನಿಲ್ಲುವುದರಲ್ಲೋ,ಕೂಗುವುದರಲ್ಲೋ ತಮ್ಮ ಅತ್ಮೀಯತೆಯ ಸೆಳೆತವನ್ನು ತೋರಿಸುತ್ತವೆ.ಇನ್ನು ಪಕ್ಷಿಗಳು ತಮ್ಮ ಕೂಗಿನ ಮೂಲಕ ತಮ್ಮವರ ಕರೆದು ತಮ್ಮಲ್ಲಿನ ಬಾಂಧವ್ಯವನ್ನು ಹೊರಗೆ ತಿಳಿ ಪಡಿಸುತ್ತವೆ.ಒಟ್ಟಿನಲ್ಲಿ ಅವರವರ ಭಾವ ಅವರದೇ ಆದ ರೀತಿ.
ಎನೂ ತಿಳಿಯದ ಹಸುಗೂಸು ಭೂಮಿಗೆ ಬರುತ್ತಿದ್ದಂತೆ ತನ್ನ ತಾಯಿಯನ್ನು ಅರಿತಂತೆ,ಎಲ್ಲೊ ಸಿಕ್ಕ ಜೀವವೊಂದು ನಮ್ಮದಾಗಿ ಮಿಡಿದಂತೆ,ಬರಹಗಾರನಿಗೆ ತಾನು ಬರೆಯುವ ಅಕ್ಷರದಲ್ಲಿ,ಸಂಗೀತಗಾರನಿಗೆ ತನ್ನಲ್ಲಿ ಅರಳುವ ಸ್ವರದಲ್ಲಿ,ವ್ಯಾಪಾರಿಗೆ ತನ್ನ ವ್ಯಾಪಾರದಲ್ಲಿ,ನಾಟ್ಯ ಬಲ್ಲವನಿಗೆ ತನ್ನ ಹೆಜ್ಜೆಗಳಲ್ಲಿ,ಚಾಲಕನಿಗೆ ತನ್ನ ವಾಹನದಲ್ಲಿ,ಚಿತ್ರಕಾರನಿಗೆ ತಾನು ಎಳೆವ ರೇಖೆಗಳಲ್ಲಿ,ಚಾಯಾಚಿತ್ರಗಾರನಿಗೆ ತನ್ನ ಕೈಯಲ್ಲಿ ಕ್ಲಿಕ್ ಅಗುವ ಪ್ರತಿಯೊಂದು ಚಿತ್ರದಲ್ಲಿ,ತೋಟದ ಮಾಲಿಗೆ ಉಸಿರಾದ ತನ್ನ ಗಿಡಗಳಲ್ಲಿ, ಶಿಕ್ಷಕನಿಗೆ ತಾನು ಬೋಧಿಸುವ ಪಾಠಗಳಲ್ಲಿ,ರೈತನಿಗೆ ಬೆವರ ಹರಿಸಿ ತೆಗೆವ ಹಸಿರಿನಲ್ಲಿ ಹೀಗೆ ನಮ್ಮದೆನ್ನುವ ಭಾವ ಸದಾ ಜಾಗ್ರತವಾಗಿರುತ್ತದೆ.ಅದರೊಂದಿಗೆ ಅಪ್ಯಾಯಮಾನವಾದ ಭಾವ ಬೆಳೆದು ಬಿಟ್ಟಿರುತ್ತದೆ.ಕೆಲವೊಮ್ಮೆ ಎನೂ ಅಲ್ಲದಿದ್ದರೂ ಅವರನ್ನು\ಅದನ್ನು ನೋಡಿದ ಘಳಿಗೆ ಮನಸೊಮ್ಮೆ ಮುದಗೊಂಡು ಮೆಲುನಗುವೊಂದು ಮೂಡಿ ಮರೆಯಾದರೆ,ಎಲ್ಲೋ ನೊವುಂಡ ಜನರನ್ನು ಕಂಡ ಕ್ಷಣ ಅರಿವಿಗೆ ಬಾರದಂತೆ ಅಯ್ಯೋ ಎಂದಿರುತ್ತದೆ.ಹೀಗೆ ಭಾವಗಳ ಪರಿಧಿ ಬಹು ದೊಡ್ಡದು.ಕಾಣದೆ ಅನುಭವಕ್ಕೆ ಬರುವಂತದ್ದು.ಭಾವಗಳ ಸಂಕೋಲೆಯಲ್ಲಿ ತೊಳಲಾಡುವ,ಸಂತೋಷದಲ್ಲಿ ತೇಲಾಡುವ ಜೀವನ ನಮ್ಮದು.ಒಟ್ಟಿನಲ್ಲಿ ಜೀವಕ್ಕಿರುವುದು ಭಾವಗಳೆಂಬ ಮೆರುಗು.ಭಾವ ಇದ್ದರೇನೇ ಬದುಕಾಗುವುದು ಸೊಭಗು......
[ಇದು 26 Feb ಕನ್ನಡಪ್ರಭದ ಚುಕ್ಕಿ ಯಲ್ಲಿ ಪ್ರಕಟಿತ ಲೇಖನ.http://www.kannadaprabha.com/pdf/2622011/17.pdf]



