ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ

ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ
ಬರೋಬ್ಬರಿ ಆರು ವರ್ಷಗಳ ಹಿಂದೆ ನನ್ನ ಸೆಳೆದ ಸಾಲುಗಳಿವು...ಮನೆಯ ಬೆಚ್ಚನೆಯ  ಪ್ರೀತಿಯಿಂದ ಹೊರಬಂದು ಜಗತ್ತನ್ನು ಕಾಣುವಂತೆ ಮಾಡಿದ್ದೆ ಈ ಪದಗಳು..ಹೌದು ಉತ್ತರ ಕನ್ನಡದ ಮೂಲ,ದಕ್ಷಿಣ ಕನ್ನಡದ ಹಾದಿ ಹಿಡಿದು ನಾನು ನನ್ನ ಗುರುತಿಸಿ ಕೊಂಡಿದ್ದೆ ಇಲ್ಲಿ. ಅಪ್ಪನ ಕೈ ಹಿಡಿದು ಬಸ್
ಇಳಿಯುವಾಗ,ಮಾರುದ್ದಕ್ಕೆ ಪಸರಿಸಿದ್ದ ಚಂದನೆಯ ಕಟ್ಟಡ,ಮುಂದೆ ಕಾಣುವ ಹೆಸರಾಂತ ಗಡಾಯಿ ಕಲ್ಲು,ಸುತ್ತಲು ತುಂಬಿರುವ ವಿದ್ಯಾ ಸಂಸ್ಥೆಗಳು ಇವೆಲ್ಲದರ ಜೊತೆ ನಾನು ಕಳಿಯ ಬೇಕಾಗಿದ್ದ ಭವಿಷ್ಯ ರೂಪಿಸುವ ಎರಡು ವರ್ಷಗಳು ಇವಿಷ್ಟೇ ನನ್ನ ಗಮನದಲ್ಲಿದ್ದಿದ್ದು..ನಾನು ಹೇಳುತ್ತಿರುವುದು ನಮ್ಮ ಕರ್ನಾಟಕದ ಪ್ರಸಿದ್ಧ ವಿದ್ಯಾ ಸಂಸ್ಥೆ ಗಳಲ್ಲೊಂದಾದ SDM  ಎಜುಕೇಶನ್ ಟ್ರಸ್ಟ್ ನ ತವರು ಉಜಿರೆ ಬಗ್ಗೆ..ಅಲ್ಲಿ ಕಲಿತಿದ್ದು,ಅಳವಡಿಸಿ ಕೊಂಡಿದ್ದು ನನ್ನ ಬದುಕಿನ ಉದ್ದಕ್ಕೂ ನನಗೆ ಮಾರ್ಗದರ್ಶಿ.ಬಹುಷಃ ಅಲ್ಲಿಯ ನೀರು ಕುಡಿದ ಪ್ರತಿಯೊಬ್ಬರೂ ಈ ಮಾತನ್ನು ಒಪ್ಪಬಹುದು..ಸೀಟ್ ಪಡೆಯಲು ಇರುತ್ತಿದ್ದ ಉದ್ದನೆಯ ಸಾಲಿನಲ್ಲಿ ನಮ್ಮವರ ಮಾತು ಕೇಳಿದರೆ ಸಾಕೆಂಬ ಭಾವ ಅಲ್ಲಿ ಸೇರಲು ಬರುತ್ತಿದ್ದ ಪ್ರತಿಯೊಬ್ಬರಿಗೂ..ಕೊನೆಗೆ ಹಾಸ್ಟೆಲಿನಲ್ಲಿ ಬೇಕಂತಲೇ ರೂಂ ಕೊಡುತ್ತಿದ್ದದು ನಮ್ಮವರ ಬಿಟ್ಟೆ.:)ಯಾಕೆಂದರೆ ಅದು ಅಲ್ಲಿನ ಪದ್ಧತಿ.ಬೆರೆಯುವ,ಅರಿಯುವ ಮನಸ್ಸು ನಮ್ಮದಾಗಬೇಕಂಬ ಆಶಯ ಅವರದು..ಶಿಸ್ತು, ಸ್ವಚ್ಛತೆ ಅಲ್ಲಿ ನೋಡಿ ಬೆರಗಾಗಬೇಕು..ಸ್ವಂತಿಕೆ ಅನ್ನೋದನ್ನು ಅಲ್ಲಿ ನೋಡಿ ಕಲಿಯಬೇಕು..ಇದು ಉತ್ಪ್ರೇಕ್ಷೆ ಅಲ್ಲ.ಅಲ್ಲಿ ಬೆರೆತು ಹೋಗಿರುವ ಅಂಶ.

ಅಲ್ಲಿ ಕಳೆದ ಎರಡು ವರ್ಷಗಳು ಸಾಕಷ್ಟು ನೆನಪು,ಅನುಭವ,ಮೌಲ್ಯಗಳನ್ನು ಕೊಟ್ಟಿದೆ.ಪ್ರಸಿದ್ಧ ತೀರ್ಥಕ್ಷೇತ್ರದಲ್ಲೊಂದಾದ ಧರ್ಮಸ್ಥಳಕ್ಕೆ ಸರಿಯಾಗಿ 5km ಹಿಂದೆ ಸಿಗುವ ಊರೇ ಉಜಿರೆ.ನಾನು ಓದುವಾಗ ಅದು ತುಂಬಾ ಚಿಕ್ಕ ,ಇತ್ತ ಹಳ್ಳಿಯೂ ಅಲ್ಲದ ಪಟ್ಟಣವು ಅಲ್ಲದ ಊರು.ಅಲ್ಲಿ ಇದ್ದಿದ್ದು ಬರಿ ಕಾಲೇಜ್, ಶಾಲೆ,ಹಾಸ್ಟೆಲ್ ಇಷ್ಟೇ.ಅಲ್ಲೋ ಇಲ್ಲೋ ಇದ್ದ ಅಂಗಡಿಗಳು.ಇದ್ದಿದ್ದು ಒಂದೇ ಫೇಮಸ್ ಅಮೃತ ಚಾಟ್ಸ್. ಆದ್ರೆ ಈಗ ಅದು ತುಂಬಾ ಬೆಳೆದ ಸಿಟಿ.ಕಳೆದ ವರ್ಷ ನಾನು ಹೋದಾಗ ನನಗೆ ಗುರುತು ಸಿಗದೇ ಹೋದಷ್ಟು ಬದಲಾಗಿದೆ.ನಮ್ಮ ಕಾಲೇಜ್ ನ ಪಕ್ಕ ಮತ್ತೊಂದು ಕಾಲೇಜ್ ಬಂದು ನಿಂತಿದೆ.ನಮ್ಮ ಕಾಲೇಜ್ ಅಂತು ಸಿಕ್ಕಾಪಟ್ಟೆ ಬದಲಾಗಿದೆ..ನಾವು ಕಳೆದ ಕ್ಲಾಸರೂಂ ಗಳೆಲ್ಲ ಗ್ರಾನೈಟ್  ಗಳಿಂದ ಕಂಗೊಳಿಸುತ್ತಿವೆ.ನಾವು ಇದ್ದಾಗಲೇ ತಲೆ ಎತ್ತಿದ residential ಕಾಲೇಜ್ ಇನ್ನಷ್ಟು ಬಣ್ಣಗಳಿಂದ ಕಂಗೊಳಿಸುತ್ತಿದೆ.ಆದರೆ ಎಷ್ಟೇ ಬದಲಾಗಿದ್ದರೂ ನಮ್ಮ ನೆನಪುಗಳು ಇನ್ನು ಹಸಿರು.ಸೆಂಟ್ರಲ್ ಜೈಲ್  ಗೆ ಮತ್ತೊಂದು ಹೆಸರೇನೋ ಎನ್ನುವಂತಿದ್ದ ಮೈತ್ರೆಯೀ ಹಾಸ್ಟೆಲ್,ಬೆಳಗ್ಗೆ ನಮ್ಮ ಎಬ್ಬಿಸಲು ಹಾಕುತ್ತಿದ್ದ ಸುಪ್ರಭಾತ,ನಿದ್ದೆ ಕಣ್ಣಿನಲಿ ಮಾಡುತ್ತಿದ್ದ 4 ಪ್ರಾರ್ಥನೆಗಳು,ತಪ್ಪದೆ ಪಾಲಿಸಬೇಕಾಗಿದ್ದ ರೂಲ್ಸ್ ಗಳು.ಏನೇ ಅಗಿದ್ದರೂ ಆ ದಿನಗಳು ಸುಂದರ ಸುಂದರ.ತಿಂಗಳ್ಕ್ಕೊಂದು ಸಲ ಬರುತ್ತಿದ್ದ ವಿಂಗ್ಸ್ ಪ್ರೊಗ್ರಾಮ್,ಅದಕ್ಕಾಗಿ ನಡೆಸುತ್ತಿದ್ದ ತಯಾರಿಗಳು,ಸಿಗುತ್ತಿದ್ದ ಮಜನೆ ಬೇರೆ.ಕರ್ನಾಟಕದ ಬೇರೆ ಬೇರೆ ಊರುಗಳಿಂದ ಬರುತ್ತಿದ್ದ ಎಲ್ಲರ ಆಚಾರ,ವಿಚಾರಗಳು ಬೇರೆ ಬೇರೆ ಆಗಿರುತ್ತಿದ್ದರೂ ಅವರೆಲ್ಲರ ಸಂಬಾಳಿಸಲು ಇರಬೇಕಾಗಿದ್ದ ಒಬ್ಬ strong warden.ಸಾಲಿನಲ್ಲಿ ನಿಂತು,ಕಾದು ವಾರಕ್ಕೊಂದು ಸಲ ಮನೆಗೆ ಫೋನ್ ಮಾಡುತ್ತಿದ್ದದು,ಭಾನುವಾರ ಬೆಳಗ್ಗೆ ಉದ್ದನೆಯ ಸಾಲಿನಲ್ಲಿ ನಿಂತು ಮಸಾಲ ದೋಸೆ ತಿನ್ನುತ್ತಿದ್ದದು,ತೂಕಡಿಸುತ್ತಾ warden ಗೆ ಹೆದರಿ ಓದುತ್ತಿದ್ದದು,ಬೆಳಗ್ಗೆ,ಸಂಜೆ ಬಿಸಿ ನೀರಿಗಾಗಿ ನಲ್ಲಿಯ ಮುಂದೆ ನಿಲ್ಲುತ್ತಿದ್ದದು,ರೂಮಿನ ಇಂಚಿಂಚು ಬಿಡದೆ ಸ್ವಚ್ಛಗೊಲಿಸುತ್ತಿದ್ದದು,ಮನೆಗೆ ಹೋದರೆ ಮರೆತು ಸಹಿ ಹಾಕಿಸಿ ಕೊಳ್ಳದೆ ಬೈಸಿ ಕೊಂಡಿದ್ದು,ದಾರಿಯಲ್ಲಿ ಇದ್ದ ಇಂದ್ರಣ್ಣ ನ ಅಂಗಡಿಯ ಹೊರಗೆ ನಿಂತು ಬೋಂಡ ಜ್ಯೂಸ್ ಕುಡಿಯುತ್ತಿದ್ದದು,ತಿಂಗಳಕ್ಕೊಂದು ಸಲ  ಔಟಿಂಗ್ ಗಾಗಿ ಕಾದು ಅಮ್ರಿತ್ ಚಾಟ್ಸ್ ನಲ್ಲಿ ಘೋಭಿ ಮಂಚೂರಿ ತಿನ್ನುತ್ತಿದ್ದದು,ತುಳು ಬರದೆ ತಡವರಿಸುತ್ತಿದ್ದದು ಇನ್ನು ನನ್ನಲ್ಲಿ ನನ್ನ ನೆನಪುಗಳಲ್ಲಿ ಹಸಿರಾಗಿವೆ.


ಸುಂದರವಾದ ಕಾಲೇಜ್, ಪಕ್ಕದಲ್ಲಿ ಬಹು ದೊಡ್ಡ ಗ್ರಂಥಾಲಯ,ಅಲ್ಲೊಂದು ಹಾ ಮಾ ನಾಯಕರ ಹೆಸರಿನಲ್ಲಿ ಸಾಹಿತ್ಯದ ಪ್ರತ್ಯೇಕ ವಿಭಾಗ,SDM ಸಂಸ್ಥೆಗಳ ಪ್ರಧಾನ ಕಚೇರಿ,ಪಕ್ಕದಲ್ಲೊಂದು ಮೆಚ್ಚಿನ ಕ್ಯಾಂಟೀನ್,ವಿಜಯ ಬ್ಯಾಂಕ್,ಜೈನ್ ಅಣ್ಣನ ಪುಸ್ತಕದ ಅಂಗಡಿ,ದೊಡ್ಡ auditorium,SDM ಮುದ್ರಣಾಲಯ ,ಶಿಸ್ತಿಗೆ ಹೆಸರಾದ ಸಿದ್ದವನ ಗುರುಕುಲ,ಮೈತ್ರೆಯೀ ಹಾಸ್ಟೆಲ್ ಗಳು,ಚಿಕ್ಕವರಿಂದ ಕಂಗೊಳಿಸುವ ರತ್ನ ಮಾನಸ ,ಯೋಗ,ಪ್ರಕ್ರತಿ ಚಿಕಿತ್ಸೆಗೆ ಹೆಸರಾದ ಶಾಂತಿಧಾಮ,ಮುಂದುಗಡೆ ಇದ್ದ ವಿಶಾಲವಾದ ಕ್ರೀಡಾಂಗಣ,SDM ಶಾಲೆಗಳು,ಆಗತಾನೆ ಶುರುವಾಗಿದ್ದ residential ಕಾಲೇಜ್ ಇವೆಲ್ಲ ಉಜಿರೆ ಎಂದ ತಕ್ಷಣ ನನ್ನ ನೆನಪಿಗೆ ಬರುವಂತದ್ದು.

ಅಲ್ಲಿ ಕಲಿತಿದ್ದು,ಅಲ್ಲಿನವರ ಆತ್ಮೀಯತೆ,ಸಿಕ್ಕ ಹಲವಾರು ಆತ್ಮೀಯ ಸ್ನೇಹಿತರು,ಅಕ್ಕಂದಿರು,ತಂಗಿಯರು ಇನ್ನೂ ನನ್ನ ಜೊತೆಯಲ್ಲಿ ಅಂದಿನಂತೆ.ಅದೇ ಮಾತು,ನಗು,ಅಳು ಇಂದು ಹಾಗೆಯೇ.ಕಲಿಸಿದವರ ಅಂದಿನ ಕಾಳಜಿ ಇಂದು ಹಾಗೆಯೇ ಇದೆ..ಹಿಂದಿನ ಬಾರಿ ನಾನು ಅಲ್ಲಿಗೆ ಹೋದಾಗ ನಡೆಯುತ್ತಿದ್ದ ನ್ಯಾಷನಲ್ ಲೆವೆಲ್ ವಾಲಿಬಾಲ್ ಪಂದ್ಯಾಟ ನೋಡಲು ಹೋಗಿದ್ದೆ.ನಾನು,ಮತ್ತು ನನ್ನ ಸ್ನೇಹಿತೆ ಹೀಗೆ ಸಾಲಿನಲ್ಲಿ ಕುಳಿತಿದ್ದೆವು.ದೂರದಿಂದ ನಮ್ಮ ಕಂಡ ಗುರುಗಳ ಗುಂಪೊಂದು ನಮ್ಮ ಹತ್ತಿರಕ್ಕೆ ಬಂತು.ನಾವು ಇವರು ಗುರಿತು ಹಿಡಿಯಲಾರರು,ಪ್ರತಿವರ್ಷ ಏನಿಲ್ಲ ಅಂದರು ಸಾವಿರಾರು ವಿದ್ಯಾರ್ಥಿಗಳು ಹೊರಬಿಳುವರು.ಅದೂ ಅಲ್ಲದೆ ಆಗಿನ ನಮ್ಮ ಮುಖ ಪರಿಚಯಕ್ಕೂ,ಇಂದಿಗೂ ವ್ಯತ್ಯಾಸ ವಿದೆಯಲ್ಲ.ಅಂದು ಕೊಂಡಿದ್ದೆವು.ಆದರೆ ಹತ್ತಿರ ಬಂದವರೇ ನಮ್ಮ ಹೆಸರಿನಿಂದ ಹಿಡಿದು,ನಮ್ಮ division ಕೂಡ ಹೇಳಿ "ಏನಿಲ್ಲ ಸ್ವಲ್ಪ ದಪ್ಪ ಆಗಿದ್ದಾರೆ  ನಮ್ಮ ಮಕ್ಕಳು,ಇಂದಿಗೂ ಹಾಗೆಯೇ ಇದ್ದಾರೆ" ಎನ್ನಲು ನಮಗಿಬ್ಬರಿಗೂ ಆಶ್ಚರ್ಯ.ಅಂತಹ ಪರಿಸರ ಅಲ್ಲಿಯದು.ಮರುದಿನ ತಪ್ಪದೆ ಹೋಗಿ ನಮ್ಮ ಅತ್ಮೀಯರನ್ನೆಲ್ಲ ಮಾತನಾಡಿಸಿ ಕೊಂಡು ಬಂದಾಗಲೇ ಅವರಿಗೆಲ್ಲ ಸಮಾಧಾನ.


ಅಲ್ಲಿನ ಬಗ್ಗೆ ಬರೆಯುತ್ತ ಹೋದರೆ ಬರೆದಷ್ಟು ಮುಗಿಯಲಾರದು.ಪೇಪರ್ ನಲ್ಲಿ ಬರುತ್ತಿರುವ 'ಕ್ಯಾಂಪಸ್  ಕ್ಷಣಗಳು 'ಓದಿ ನನ್ನ ಕಾಲೇಜ್ ದಿನಗಳು ನೆನಪಾದವು.ನೆನಪುಗಳೆಲ್ಲ ಅಕ್ಷರ ರೂಪ ಪಡೆದವು.ನೀವು ಅವಕಾಶ ಸಿಕ್ಕರೆ ಅಲ್ಲಿಗೊಮ್ಮೆ ಭೇಟಿ ನೀಡಿ.ಖಂಡಿತ ಅದ್ಭುತ ಲೋಕ್ಕಕ್ಕೆ ಹೋಗಿ ಬಂದ ಅನುಭವ ನಿಮಗಾಗುತ್ತದೆ.ಮತ್ತೆ ಮತ್ತೊಂದು ಲೇಖನ ದೊಂದಿಗೆ ಮರಳುತ್ತೇನೆ....

ಇಂತಿ
ನಿಮ್ಮವಳು.........