ಜೀವನವೆಂಬುದು ಹೀಗೆ ಏನೋ..ಕೆಲವೊಮ್ಮೆ ಇಷ್ಟ ಪಟ್ಟಿದ್ದು ದುಸ್ತರವಾಗುತ್ತದೆ.ಎಲ್ಲವನ್ನು ಬಿಟ್ಟು ದೂರ ಹೋಗಿ ಬಿಡುವ ಮನಸ್ಸಾಗಿ ಬಿಡುತ್ತದೆ.ಅದು ಮಾನಸಿಕ ಒತ್ತಡವೋ,ಸಮಾಜದ, ಸುತ್ತಮುತ್ತಲಿನ ವಾತಾವರಣದ ಪರಿಣಾಮವೋ ಮನಸ್ಸು ಸೊರಗಿ ಕಂಗಾಲಾಗಿ ಬಿಡುತ್ತದೆ.ಏಕಾಂತ ಬಯಸುತ್ತದೆ.ನಮ್ಮ ಇಷ್ಟದ ಕೆಲಸದಿಂದಲೂ ವಿರಾಮ ಬಯಸುತ್ತದೆ.ಅದು ಕೇವಲ ಕಾಲದ ಮಹಿಮೆ ಎನ್ನುವುದು ಅರಿವಿದ್ದರೂ, ಅರಗಿಸಿ ಕೊಳ್ಳುವುದು ಸ್ವಲ್ಪ ಕಷ್ಟವೇ.ಒಂದು ಹಂತದ ವರೆಗೆ ಇವೆಲ್ಲ ಸಹ್ಯ ವಾದರೂ ಅದರ ಪರಿಣಾಮದ ಕರಿ ಛಾಯೆ ಹಾಗೆಯೇ ಉಳಿದು ಬಿಡುತ್ತದೆ.ಬಹುಶ ನಾನು ಕೂಡ ಇದೆ ಹಂತದಲ್ಲಿದ್ದೇನೆ ಎನ್ನಿಸುತ್ತಿದೆ.ಇಷ್ಟ ಪಟ್ಟು ಬರೆಯುತ್ತಿದ್ದ ಬರವಣಿಗೆಗೆ ನನ್ನಿಂದ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.ಬರೆಯ ಹೊರಟ ಅಕ್ಷರಗಳಲ್ಲೆಲ್ಲ ಮುಷ್ಕರ ಹೂಡಿದಂತೆ ಭಾಸವಾಗುತ್ತ ಇದೆ.ಇದಕ್ಕೆ ನನ್ನಲ್ಲಿನ ಒತ್ತಡವೋ,ಸಮಯದ ಅಭಾವವೋ ಅಥವಾ ಇದ್ದ ಸಮಯದಲ್ಲಿ ಕಳೆದು ಹೋಗುವ ನನ್ನ ಮನಸ್ಥಿತಿಯೋ ನಾ ಕಾಣೆ.ನನ್ನ ಕೇಳುತ್ತಿರುವ, ನನ್ನ ಬರಹವನ್ನು ತಪ್ಪದೆ ಓದುವ,ಕಳೆದು ಹೋಗುತ್ತಿರುವ ನನಗೆ ನಾನು ಹೇಳ ಹೊರಟಿರುವುದು ಇಷ್ಟೇ.ಇದೆಲ್ಲದರಿಂದ ಕೆಲ ಕಾಲ ವಿರಮಿಸಬೇಕಾಗಿದೆ. ಮತ್ತೆ ಹೊಸತನ ಚಿಗುರುವ ವರೆಗೂ ಮನಸ್ಸು ವಿರಾಮ ಬಯಸುತ್ತಿದೆ.ಮತ್ತೆ ವಾಪಸ್ಸಾಗ ಬೇಕಾಗಿದೆ ಕಾಯುತ್ತಿರುವ ಸುಂದರ ದಿನಗಳಿಗೆ.ಖಂಡಿತ ಮತ್ತೆ ಬರೆಯುತ್ತೇನೆ.ನಾನು ಬರೆಯದೆ ಹೋದರೂ ನಿಮ್ಮೆಲ್ಲರ ಬರಹಗಳನ್ನು ತಪ್ಪದೆ ಓದುತ್ತೇನೆ.ಆದಷ್ಟು ಬೇಗ ವಾಪಸ್ಸಾಗುವ ಮನಸ್ಸು,ಆಸೆ ನನ್ನಲ್ಲೂ ಇದೆ. ಆ ದಿನ ನಾಳೆನೇ ಇರಬಹುದು,ತಿಂಗಳಾಗಬಹುದು ಅಥವಾ ಮತ್ಯಾವದೋ ದಿನ ವಾಗಬಹುದು. ಅಲ್ಲಿಯವರೆಗೂ ನಾನು ಇಲ್ಲಿ, ನಿಮ್ಮೆದುರಿನಲ್ಲಿ ಕಾಣಸಿಗುವುದು ಕಷ್ಟವಾಗ ಬಹುದು. ಆದರೆ ಖಂಡಿತ ಮತ್ತೆ, ಮೊದಲಿನಂತೆ,ಹೊಸ ಬರವಣಿಗೆಯೊಂದಿಗೆ ವಾಪಾಸ್ಸಗುತ್ತೇನೆ.ಆಶಯ ನನ್ನದಾಗಿರಲಿ, ಪ್ರೋತ್ಸಾಹ ನಿಮ್ಮದಾಗಿರಲಿ..
ಹೋಗಿ ಬರುವ ಭರವಸೆ ಯೊಂದಿಗೆ ,
ನಿಮ್ಮವಳು..
