ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಜೊತೆ ಜೊತೆಯಲಿ ಎನ್ನುವುದಕ್ಕೆ ಹೀಗೊಂದು ಅರ್ಥವೇ????!......


ಮದುವೆಯ ಈ ಬಂಧ, ಅನುರಾಗದ ಅನುಬಂಧ...ಏಳೇಳು ಜನುಮದಲು ತೀರದ ಸಂಬಂಧ...

ಈ ಹಾಡಿನ   ಸಾಲುಗಳು ತುಂಬಾ ಸರಳವಾಗಿದ್ದರೂ ಇದರ ಒಳಾರ್ಥ ಅರ್ಥಪೂರ್ಣವಾಗಿದ್ದೂ,ಸಮಾಜಕ್ಕೆ ಒಂದುರೀತಿಯಲ್ಲಿ ಸಂದೇಶವನ್ನು ಸಾರುವಂತಿದೆ.

ಮದುವೆ ಎನ್ನುವುದು ಪ್ರತಿಯೊಬ್ಬ ಹೆಣ್ಣು-ಗಂಡಿನ ಅಮೂಲ್ಯವಾದ ಘಟ್ಟ.ಸಾಗಿದ ಸಹಸ್ರಾರು ದಿನಗಳ ಒಂಟಿ ಜೀವನಕ್ಕೆ ತಿರುವು ನೀಡಿ ಜಂಟಿಯಾಗುವ ಕಾಲ.ಎಲ್ಲೋ ಹುಟ್ಟಿ ಎಲ್ಲೋ ಬೆಳೆದು,ಆಚಾರ,ವಿಚಾರಗಳೆಲ್ಲವೂ  ಬೇರೆ ಬೇರೆಯಾದ ಎರಡು ಮನಗಳನ್ನು ಸೇರಿಸಿ ಸೈರಿಸಿ,ಮೂರು ಗಂಟಿನಲ್ಲಿ ಕಟ್ಟಿ,ಏಳು ಹೆಜ್ಜೆಗಳ ನಡೆದು,ಜೀವನ ಪೂರ್ತಿ ಕಷ್ಟವೋ,ಸುಖವೋ,ನಿನ್ನೊಂದಿಗೆ ನನ್ನ ಪಾಲೂ ಸೇರಲಿ ಎಂಬ ವಚನದೊಂದಿಗೆ, ಮುಂಬರುವ ದಿನಗಳಲ್ಲಿ ನಮ್ಮಿಬ್ಬರ  ನಿಲುವು ಒಂದೇ ಆಗಿರಲಿ ಎಂದು  ಕಾಯಾ, ವಾಚ, ಮನಸಾ ಪ್ರಮಾಣ ಮಾಡುವ ದಿನ. ಮದುವೆ  ನಮ್ಮ ಭಾರತೀಯ ಸಂಪ್ರದಾಯದಲ್ಲಿ ಅತ್ಯಂತ ಮಹತ್ತರವಾದ ಸ್ಥಾನವನ್ನು ಹೊಂದಿದೆ.ಪುರುಷ ಮತ್ತು ಪ್ರಕೃತಿ ಈ ಸೃಷ್ಟಿಯ ಎರಡು ಕಣ್ಣುಗಳೆಂದೇ ಭಾವಿಸಿದೆ.ಒಂದು ಹೆಣ್ಣು-ಗಂಡಿನ ಸಂಬಂಧ ಕ್ಕೆ ಮದುವೆಯ ಪವಿತ್ರವಾದ ನೆಲೆಗಟ್ಟನ್ನು ನೀಡಿ ಕೇವಲ ದೈಹಿಕ ವಾಂಛೆ ಗಳ ದ್ರಷ್ಟಿಯಲ್ಲಿ ಅದನ್ನು ನೋಡದೆ ಲೌಕಿಕ ಸುಖವನ್ನು ಹೊಂದಲೆಂಬ ಉನ್ನತ ಆಶಯ ನಮ್ಮ ಭಾರತೀಯ ಸಂಸ್ಕೃತಿಯದ್ದು.ಇದು ಕೇವಲ ಇಬ್ಬರ ನಡುವಿನ ಬಾಂಧವ್ಯವಾಗಿರದೆ ಎರಡು ಕುಟುಂಬಗಳ, ಹಲವಾರು ಬಂಧು ಬಾಂಧವರ ಗಳ ನಡುವಿನ ಸಂಬಂಧವು ಹೌದು.


ಜಗತ್ತು ಹಿಂದಿಗಿಂತ ಅಭಿವೃದ್ಧಿಯಾಗಿದೆ.ಕಾಲಕ್ಕೆ ತಕ್ಕಂತೆ ನಡುವಳಿಕೆಗಳು ಬದಲಾಗುತ್ತಿವೆ.ಎಷ್ಟೋ ಸಂಗತಿಗಳು ತಮ್ಮ ಸತ್ವವನ್ನು ಕಳೆದುಕೊಂಡು ಬಡವಾಗುತ್ತಿರುವುದು ಸಾಮಾನ್ಯವೆಂಬಂತೆ ಸ್ವೀಕಾರವಾಗಿ ಬಿಟ್ಟಿದೆ.ಮದುವೆಯೂ  ಇದಕ್ಕೆ ಹೊರತಾಗಿಲ್ಲ.ಜೊತೆ ಜೊತೆಯಲಿ ಎನ್ನುವುದಕ್ಕೆ ಹೊಸ ಅರ್ಥವನ್ನೇ ಕೊಟ್ಟು,ಯಾವದೇ ಸಂಬಂಧಗಳ ಕೊಂಡಿಯನ್ನು ಬೆಸೆಯದೆ ನಾಲ್ಕು ದಿನ ಒಬ್ಬರೊಡನೆ ಕಳೆದು ಸಂಗಾತಿತ್ವದ ಸಾಮರ್ಥ್ಯವನ್ನು ಬದುಕಿದ ನಾಲ್ಕಾರು ದಿನಗಳಲ್ಲಿ ಅಳೆದು, ಕೊನೆಗೆ ಸರಿಯಿಲ್ಲವೆಂಬ ರಶೀದಿಯೊಂದಿಗೆ ಏನೂ ಆಗಿಲ್ಲವೆಂಬಂತೆ ಎದ್ದು ಹೋಗಿಬಿಡಬಲ್ಲ "Living Together"  ಎನ್ನುವ ಪಾಶ್ಚಾತ್ಯ ರೀತಿ ನಮ್ಮ ಭಾರತದಂತಹ ದೇಶದಲ್ಲೂ ನಗೆ ಬೀರುತ್ತಿದೆ ಎಂದರೆ ನಾವೆಷ್ಟು ಮುಂದುವರೆದಿದ್ದೇವೆ ಎನ್ನುವುದು ಕೇಳಿ ಕೊಳ್ಳಬೇಕಾದ ಪ್ರಶ್ನೆಯೇ. ನಂಬಿಕೆಯ ಅಡಿಗಟ್ಟಿನಲ್ಲಿ, ಪರಸ್ಪರರ ಭಾವನೆಗಳನ್ನು  ಗೌರವಿಸುವ,ಹೊಂದಿ ಕೊಳ್ಳುವ, ಇಬ್ಬರಿಗಾಗಿ ಬದುಕು ಎನ್ನುವಂತೆ ಬದಕುವ  ಮದುವೆ ಎಂಬ ಕಾಳಜಿಗೂ, ಒಬ್ಬರೊಂದೊಬ್ಬರಿಗೆ ಅವಲಂಬನೆಯೇ ಇಲ್ಲದಂತೆ ಕವಲು ದಾರಿಯಲ್ಲಿ ನಡೆಯುತ್ತಾ ಕೇವಲ ದೈಹಿಕ ಆಕರ್ಷಣೆಯ ಮುಂದೆ ಮೈಚಾಚಿ ಮಲಗುವ ಈ ಹೊಲಸು ಪದ್ಧತಿ ನಮಗೆ ಎಷ್ಟು ಸರಿ.?.ಜೀವನಪೂರ್ತಿ ಒಬ್ಬರನ್ನೇ ನೆಚ್ಚಿಕೊಂಡು ನಡೆದು ಬಂದ ಈ ದಾರಿಯಲ್ಲಿ ಇವರು ಹೊಂದದಿದ್ದರೆ ಇನ್ನೊಬ್ಬರು,ಇನ್ನೋಬ್ಬರಾಗದಿದ್ದರೆ ಮತ್ತೊಬ್ಬರು ಹೀಗೆ ಬದಲಾಯಿಸುವ ಪದ್ಧತಿ ಎಷ್ಟು ಮನಸಿಗೆ ಹಿತವಾಗಬಲ್ಲದು?. ಸಮೀಕ್ಷೆಯ ಪ್ರಕಾರ ನಮ್ಮ ದೇಶದ ಎಲ್ಲ ಮೆಟ್ರೋಪಾಲಿಟನ್ ಸಿಟಿಗಳನ್ನು ಆತಂಕಕಾರಿ ರೀತಿಯಲ್ಲಿ ಸದ್ದಿಲ್ಲದೇ ಅಕ್ರಮಿಸುತ್ತಿರುವ ಮಹಾಮಾರಿ ಇದು.


ಹೌದು.ಬದಲಾವಣೆಯ,ಆಧುನಿಕತೆಯ ಗಾಳಿ ಬೀಸಬೇಕು.ನಾವು ಮುಂದುವರಿಯಬೇಕಾದರೆ ಎಲ್ಲರೆದುರು ಮುಖವೊಡ್ಡಿ ನಿಲ್ಲಬೇಕಾದರೆ ಇದು ಅವಶ್ಯಕತೆಯಷ್ಟೇ ಅನಿವಾರ್ಯ.ಆದರೆ ಆ ಗಾಳಿ ನಮ್ಮ ಬುಡವನ್ನೇ ಅಲ್ಲಾಡಿಸ ಹೊರಟಾಗ ಎಚ್ಚೆತ್ತು ಕೊಳ್ಳಬೇಕಾಗಿರುವುದು ಅಷ್ಟೇ ಅವಶ್ಯ.ಬದುಕಿಗೆ ಬದಲಾವಣೆ ಸಕಾರತ್ಮಕ ವಾಗಿ ಬೇಕೆ ಹೊರತು ಬದಲಾವಣೆಯೇ ಬದುಕಾಗಿ, ನಕಾರಾತ್ಮಕ ಪರಿಣಾಮವನ್ನು ಸಮಾಜದ ಮೇಲೆ ಬೀರಲು ಆಸ್ಪದ ನೀಡಬಾರದಲ್ಲವೇ.?ನಮ್ಮ ಜನತೆ ಇದರ ಬಗ್ಗೆ ಗಮನಹರಿಸ ಬೇಕಾಗಿದೆ.ಪಶ್ಚಾತ್ತಾಪ ಪಡಬೇಕಾಗುವ ಮುನ್ನ ಅರಿತರೆ,ಮುನ್ನುಗ್ಗುವ ಅಬ್ಬರದೆದುರು ಅವಲೋಕನೆಯ ಕಣ್ಣಿದ್ದರೆ ನಮಗೂ ಒಳ್ಳೆಯದು.ಸಮಾಜಕ್ಕೂ ಒಳ್ಳೆಯದು.